![](https://i0.wp.com/karavalikirana.com/kan/wp-content/uploads/2024/04/Untitled-1-10.jpg?fit=900%2C521&ssl=1)
ನಾಡಿನೆಲ್ಲೆಡೆ ಹಿಂದೂ ಧರ್ಮೀಯರ ಹೊಸ ವರ್ಷ ‘ಯುಗಾದಿ’ ಆಚರಣೆ: ದೇವಾಲಯಗಳಲ್ಲಿ ವಿಶೇಷ ಪೂಜೆ, ಮನೆಗಳಲ್ಲಿ ಹಬ್ಬದ ಸಂಭ್ರಮ
ಬೆಂಗಳೂರು: ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷಕೆ ಹೊಸತು ಹೊಸತು ತರುತಿದೆ.
ಎಲ್ಲರಿಗೂ ಕ್ರೋಧಿ ನಾಮ ಸಂವತ್ಸರ ಚಾಂದ್ರಮಾನ ಯುಗಾದಿ ಹಬ್ಬದ ಶುಭಾಶಯಗಳು…
ಭಾರತದಲ್ಲಿ ಯುಗಾದಿ ಹಬ್ಬವನ್ನು ಬಹಳ ವಿಶೇಷವಾಗಿ, ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪಂಚಾಗದ ಪ್ರಕಾರ ಯುಗಾದಿ ಹಬ್ಬದ ದಿನದಿಂದ ಹೊಸ ಸಂವತ್ಸರ ಅಂದರೆ ಹೊಸ ವರ್ಷ ಆರಂಭವಾಗುತ್ತದೆ. ಈ ಹಬ್ಬದಂದು ಬೇವು ಬೆಲ್ಲ ಹಂಚಿ, ವಿವಿಧ ಖಾದ್ಯಗಳನ್ನು ತಯಾರಿಸುವ ಜೊತೆಗೆ ಮನೆ ಅಲಂಕಾರಕ್ಕೂ ವಿಶೇಷ ಮಹತ್ವವಿದೆ. ಈ ದಿನ ತಳಿರು ತೋರಣಗಳಿಂದ ಮನೆ ಅಲಂಕಾರ ಮಾಡಬೇಕು. ಹೀಗೆ ಅಲಂಕಾರ ಮಾಡುವುದರಿಂದ ಮುಂದಿನ ದಿನಗಳಲ್ಲಿ ಶುಭವಾಗುತ್ತದೆ ಎಂಬ ನಂಬಿಕೆ.
ದೇವಾಲಯಗಳಲ್ಲಿ ವಿಶೇಷ ಪೂಜೆ, ಭಕ್ತರ ದರ್ಶನ: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ದೇವಾಲಯಗಳಲ್ಲಿ ಪೂಜೆ-ಪುನಸ್ಕಾರಗಳು ಮುಂಜಾನೆಯಿಂದಲೇ ನಡೆಯುತ್ತಿದೆ. ಮನೆಗಳಲ್ಲಿ ಹೆಂಗಳೆಯರು, ಮಕ್ಕಳು ಬೆಳಗ್ಗೆಯೇ ಎದ್ದು ಮನೆ ಮುಂದೆ ನೀರು ಹಾಕಿ ರಂಗೋಲಿ ಇಟ್ಟು ಮನೆ, ದೇವರ ಮನೆಯನ್ನು ಸ್ವಚ್ಛಗೊಳಿಸಿ ಸ್ನಾನ ಮಾಡಿ ಹೊಸ ಉಡುಗೆ ತೊಟ್ಟು ಯುಗಾದಿ ಸಂಭ್ರಮಕ್ಕೆ ತೊಡಗುತ್ತಿದ್ದಾರೆ.
ದೇವರ ಮನೆಯನ್ನು ಅಲಂಕಾರಗೊಳಿಸಿ ಮನೆಯವರೆಲ್ಲಾ ಭಕ್ತಿಯಿಂದ ಪೂಜೆ, ದೇವರ ಧ್ಯಾನ, ಶ್ಲೋಕ, ಭಜನೆಗಳಲ್ಲಿ ತೊಡಗಿದ್ದಾರೆ. ಯುಗಾದಿ ಹಬ್ಬಕ್ಕೆ ವಿಶೇಷ ಅಡುಗೆಗಳನ್ನು ಮಾಡುತ್ತಿದ್ದಾರೆ.
ಬೆಲೆ ಏರಿಕೆ, ಬಿಸಿಲಿನ ಮಧ್ಯೆ ಬತ್ತದ ಉತ್ಸಾಹ: ಬೇಸಿಗೆಯ ಬಿರುಬಿಸಿಲು ಈ ಬಾರಿ ಜೋರಾಗಿಯೇ ಇದೆ. ಅದರ ಜೊತೆ ಮಾರುಕಟ್ಟೆಯಲ್ಲಿ ತರಕಾರಿ, ಹೂವು, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದರೆ ಹಬ್ಬ ಆಚರಣೆಯಲ್ಲಿ ಜನರು ಹಿಂದೆ ಬಿದ್ದಿಲ್ಲ.