Log In
BREAKING NEWS >
Nandini Milk: ಕೆಎಂಎಫ್ ನಂದಿನಿ ಮಿಲ್ಕ್ ಹೊಸ ದಾಖಲೆ​​: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ....

ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆ ಸಹಿ ಹಾಕದೇ ವಾಪಸ್ ಕಳುಹಿಸಿದ ರಾಜ್ಯಪಾಲರು: ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆ

ಬೆಂಗಳೂರು, ಮಾರ್ಚ್​ 21: ರಾಜ್ಯದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿದ್ದ ಹೆಚ್ಚು ಆದಾಯವಿರುವ ದೇಗುಲಗಳಿಗೆ ತೆರಿಗೆ ವಿಧಿಸುವ ಹಿಂದೂ ಧಾರ್ಮಿಕ ದತ್ತಿ ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆಯನ್ನು (Karnataka Hindu Religious Institutions and Charitable Endowments (Amendment) Bill, 2024) ರಾಜ್ಯಪಾಲ (Karnataka Governor) ಥಾವರಚಂದ್ ಗೆಹ್ಲೋಟ್ (Thawar Chand Gehlot) ಸಹಿ ಹಾಕದೇ ವಾಪಸ್ ಕಳುಹಿಸಿದ್ದಾರೆ. ಇದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗವಾದಂತಾಗಿದೆ. ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಧರ್ಮದಾಯ ದತ್ತಿ ಇಲಾಖೆ (ಮುಜರಾಯಿ) ವ್ಯಾಪ್ತಿಯ ಎ ಮತ್ತು ಬಿ ಶ್ರೇಣಿಯ ದೇಗುಲಗಳ ಆದಾಯದ ಹಣವನ್ನು ಸಿ ಶ್ರೇಣಿಯ ದೇವಾಲಯಗಳ ಅಭಿವೃದ್ಧಿಗೆ ಬಳಸುವುದು ಮತ್ತು ಶ್ರೀಮಂತ ದೇಗುಲಗಳಿಗೆ ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿದ ಮಸೂದೆ ಇದಾಗಿದೆ. ಇದನ್ನು ಎರಡೆರಡು ಬಾರಿ ವಿಧಾನಸಭೆಯಲ್ಲಿ ಮಂಡನೆ ಮಾಡಿ ಕಾಂಗ್ರೆಸ್ ಸರ್ಕಾರ ಅನುಮೋದನೆ ಪಡೆದಿತ್ತು.

ಮಸೂದೆಯನ್ನು ವಾಪಸ್ ಕಳುಹಿಸಿರುವ ರಾಜ್ಯಪಾಲರು ಕೆಲವೊಂದು ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ತಿದ್ದುಪಡಿ ಮಸೂದೆಯನ್ನು ಸಚಿವ ರಾಮಲಿಂಗಾ ರೆಡ್ಡಿ ಬಜೆಟ್ ಅಧಿವೇಶನದಲ್ಲಿ ವಿಧಾನ ಪರಿಷತ್​ನಲ್ಲಿ ಮಂಡಿಸಿದ್ದರು. ಆದರೆ, ಅದಕ್ಕೆ ಸೋಲಾಗಿ ಸರ್ಕಾರ ತೀವ್ರ ಮುಖಭಂಗವನ್ನು ಎದುರಿಸಿತ್ತು. ಹಾಗಾಗಿ, ವಿಧಾನಸಭೆಯಲ್ಲಿ ಎರಡೆರಡು ಬಾರಿ ಮಂಡಿಸಿ, ಅನುಮೋದನೆ ಪಡೆದುಕೊಂಡು, ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿತ್ತು.

ಸಾಮಾನ್ಯ ಸಂಗ್ರಹಣ ನಿಧಿ ವಿಚಾರದಲ್ಲಿ ತಿದ್ದುಪಡಿ ಮಾಡಿದ್ದ ಸರ್ಕಾರ, ಇದನ್ನು ಶೇ 10ಕ್ಕೆ ಏರಿಕೆ ಮಾಡಿತ್ತು.

ವಾರ್ಷಿಕವಾಗಿ 10 ಲಕ್ಷ ರೂಪಾಯಿಯಿಂದ ಒಂದು ಕೋಟಿ ರೂಪಾಯಿಯವರೆಗೆ ಆದಾಯವಿರುವ ದೇವಾಲಯಗಳಿಗೆ ಶೇಕಡ 5ರಷ್ಟು ಮತ್ತು 1 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಇರುವ ದೇಗುಲಗಳಿಗೆ ಶೇಕಡ 10ರಷ್ಟು ತೆರಿಗೆ ವಿಧಿಸುವ ಧಾರ್ಮಿಕ ದತ್ತಿ, ಧರ್ಮಾದಾಯ ತಿದ್ದುಪಡಿ ಮಸೂದೆ ಇದಾಗಿದೆ.

ಇದಕ್ಕೆ ಪ್ರತಿಪಕ್ಷ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ದೇಗುಲಗಳ ಆದಾಯಕ್ಕೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಣ್ಣು ಹಾಕಿದೆ ಎಂದು ಬಿಜೆಪಿ ಕಿಡಿಕಾರಿತ್ತು.

ಈ ಎಲ್ಲ ಬೆಳವಣಿಗೆಗಳ ನಂತರ ಸ್ಪಷ್ಟನೆ ನೀಡಿದ್ದ ಸರ್ಕಾರ, ಹಿಂದೂ ದೇಗುಲಗಳ ಆದಾಯವನ್ನು ಅನ್ಯ ಕಾರ್ಯಗಳಿಗೆ ಬಳಸುವುದಿಲ್ಲ. ಸಂಗ್ರಹವಾಗುವ ಹಣವನ್ನು ಸಿ ಶ್ರೇಣಿಯ ದೇವಾಲಯಗಳ ಅಭಿವೃದ್ಧಿಗೆ ಬಳಸಲು ನಿರ್ಧರಿಸಲಾಗಿದೆ ಎಂದು ಹೇಳಿತ್ತು.

No Comments

Leave A Comment