ಖಾಸಗಿ ನೀರಿನ ಟ್ಯಾಂಕರ್ಗಳಿಗೆ ಸರ್ಕಾರದಿಂದ ದರ ನಿಗದಿ: ಡಿಸಿಎಂ ಡಿಕೆ. ಶಿವಕುಮಾರ್
ಬೆಂಗಳೂರು: ನಗರದಲ್ಲಿ ಖಾಸಗಿ ನೀರಿನ ಟ್ಯಾಂಕರ್ಗಳಿಗೆ ಸರ್ಕಾರದಿಂದ ದರ ನಿಗದಿಪಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸೋಮವಾರ ಹೇಳಿದರು.
ರಾಜಧಾನಿ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ನೀರಿನ ಟ್ಯಾಂಕರ್ಗಳಿಗೆ ದುಬಾರಿ ಬೆಲೆಯನ್ನು ವಿಧಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಸಂಬಂಧ ನೀರಿನ ಟ್ಯಾಂಕರ್’ಗಳ ಮಾಲೀಕರ ಸಂಘದೊಂದಿಗೆ ಸಭೆ ನಡೆಸಿದ ಬಳಿಕ ದರವನ್ನು ನಿಗದಿಪಡಿಸಲಾಗುವುದು ಎಂದು ಹೇಳಿದರು.
ಮಾರ್ಚ್ 1 ರಿಂದ ಮಾ,7ರವರೆಗೆ ನೋಂದಣಿಗೆ ಸೂಚಿಸಲಾಗಿದೆ. ಈಗಾಗಲೇ ನಾಲ್ಕು ದಿನ ಕಳೆದಿದ್ದು, 219 ಟ್ಯಾಂಕ್ ಮಾಲೀಕರು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ ಮೂರು ದಿನ ಕಾಲಾವಕಾಶವಿದ್ದು, ಅಷ್ಟರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಟ್ಯಾಂಕರ್ ಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.
ನಗರದಲ್ಲಿ 16,781 ಬೋರ್ವೆಲ್ಗಳಿದ್ದು, ಅದರಲ್ಲಿ 6,997 ಬತ್ತಿ ಹೋಗಿವೆ. 7,784 ಬೋರ್ ವೆಲ್ ಗಳು ಬಳಕೆಯಲ್ಲಿವೆ. ನಗರದ ಹೊರವಲಯದಲ್ಲಿ ಉತ್ತಮ ನೀರಿರುವ ಪ್ರದೇಶದಲ್ಲಿ ಬೋರ್ವೆಲ್ ಕೊರೆಯಲು ಪಾಯಿಂಟ್ಗಳನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಸ್ಥಳಗಳಿಂದ ತೆಗೆದ ನೀರನ್ನು ಟ್ಯಾಂಕರ್ಗಳ ಮೂಲಕ ನಗರದಾದ್ಯಂತ ಸರಬರಾಜು ಮಾಡಬಹುದಾಗಿದೆ ಎಂದರು.
ಕರ್ನಾಟಕ ಹಾಲು ಒಕ್ಕೂಟದಲ್ಲಿ ಬಳಕೆಯಾಗದ ಹಾಲಿನ ಟ್ಯಾಂಕರ್ಗಳನ್ನು ಈ ಬೇಸಿಗೆಯಲ್ಲಿ ನೀರು ಪೂರೈಸಲು ಬಳಸಿಕೊಳ್ಳಲಾಗುವುದ. ಎಲ್ಲಾ ನಿಷ್ಕ್ರಿಯಗೊಂಡಿರುವ ಆರ್ಒ ಪ್ಲಾಂಟ್ಗಳು ಶೀಘ್ರವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ಮತ್ತು ಅಸ್ತಿತ್ವದಲ್ಲಿರುವ ವಾಣಿಜ್ಯ ಮತ್ತು ಕೃಷಿ ಬೋರ್ವೆಲ್ಗಳನ್ನು ನೋಂದಾಯಿಸುವಂತೆ ಇದೇ ವೇಳೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
556 ಕೋಟಿ ರೂ ನೀರಿಗೆ ಮೀಸಲು
ಈ ಬಾರಿಯ ನೀರಿನ ಬಿಕ್ಕಟ್ಟು ಎದುರಿಸಲು ಎಲ್ಲ 28 ಕ್ಷೇತ್ರಗಳಿಗೆ ತಲಾ 10 ಕೋಟಿ ರೂ. ಅನುದಾನ ನೀಡಲಾಗಿದೆ. ಇದರೊಂದಿಗೆ ಬಿಬಿಎಂಪಿಗೆ 148 ಕೋಟಿ ರೂ., ಬಿಡಬ್ಲ್ಯೂಎಸ್ಎಸ್’ಬಿಗೆ 128 ಕೋಟಿ ರೂ. ಸೇರಿದಂತೆ ಒಟ್ಟು ರೂ.556 ಕೋಟಿ ಕುಡಿಯುವ ನೀರಿನ ಪೂರೈಕೆಗೆ ಮೀಸಲಿಡಲಾಗಿದೆ ಎಂದರು. ಇದೇ ವೇಳೆ ಲೋಕಸಭೆ ಚುನಾವಣೆಯ ‘ನೀತಿ ಸಂಹಿತೆ’ ಈ ವೆಚ್ಚದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾವೇರಿ 5ನೇ ಹಂತದ ಕಾಮಗಾರಿಗೆ ಸಂಬಂಧಿಸಿದಂತೆ ಬಂಡೆಗಳು, ಅರಣ್ಯದಂತಹ ಕೆಲವು ಸಮಸ್ಯೆಗಳು ಎದುರಾಗಿದ್ದು, ಪರಿಶೀಲನೆ ನಡೆಸಿ ಸಮಸ್ಯೆ ಪರಿಹರಿಸಲಾಗುವುದು. ಮೇ ಅಂತ್ಯದ ವೇಳೆಗೆ ಯೋಜನೆ ಪೂರ್ಣಗೊಳ್ಳಲಿದ್ದು, ಯೋಜನೆಯಿಂದ 775 ಎಂಎಲ್ಡಿ ನೀರು ಪೂರೈಕೆಯಾಗಲಿದೆ. ಇದರಿಂದ 110 ಗ್ರಾಮಗಳ ನೀರಿನ ಸಮಸ್ಯೆ ನೀಗಲಿದೆ ಎಂದರು.
ನೀರಿನ ಸಮಸ್ಯೆ ಕುರಿತು ಜನರು ದೂರು ದಾಖಲಿಸಲು ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಬಹುದು. ಹೊರವಲಯದ 35 ವಾರ್ಡ್ಗಳಲ್ಲಿರುವವರು (110 ಗ್ರಾಮಗಳು) ‘1533’, ಉಳಿದವರು ‘1916’ ಅನ್ನು ಸಂಪರ್ಕಿಸಬಹುದಾಗಿದೆ.
ಬಿಡಬ್ಲ್ಯೂಎಸ್ಎಸ್’ಬಿ ಕೈಗೊಂಡ ಕ್ರಮಗಳು ಇಂತಿವೆ…
ಕೊಳೆಗೇರಿ ಪ್ರದೇಶ ಜನನಿಬಿಡ ಪ್ರದೇಶ, ತಗ್ಗು ಮತ್ತು ಎತ್ತರ ಪ್ರದೇಶಗಳಲ್ಲಿ 1-3 ಸಾವಿರ ಲೀಟರ್ ಸಾಮರ್ಥ್ಯದ 336 ಟ್ಯಾಂಕ್ ಗಳನ್ನು ಸ್ಥಾಪಿಸಲಾಗಿದೆ.
6,000 ಲೀಟರ್ ಸಾಮರ್ಥ್ಯದ ಸುಮಾರು 76 ಖಾಸಗಿ ಟ್ಯಾಂಕರ್ಗಳನ್ನು ಬಾಡಿಗೆಗೆ ತೆಗೆದುಕೊಂಡು ವಿವಿಧ ಕಡೆ ಅಳವಡಿಸಿರುವ ಟ್ಯಾಂಕ್ ಗಳಿಗೆ ನೀರನ್ನು ಮರುಪೂರಣ ಮಾಡುವುದು.
ಬಿಬಿಎಂಪಿ ವ್ಯಾಪ್ತಿಯ 110 ಗ್ರಾಮಗಳು ಮತ್ತು ನೀರಿನ ಸಮಸ್ಯೆ ಉಲ್ಬಣಗೊಂಡ 256 ಪ್ರದೇಶಗಳ ನೀರಿನ ಬೇಡಿಕೆಯನ್ನು ಪೂರೈಸಲು ಬೆಂಗಳೂರು ಜಿಲ್ಲಾಧಿಕಾರಿಗಳ ಮತ್ತು ಸಾರಿಗೆ ಇಲಾಖೆಯ ಮೂಲಕ 210 ಖಾಸದಗಿ ನೀರಿನ ಟ್ಯಾಂಕರ್ ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಜಲಮಂಡಳಿಯು ಗುರುತಿಸಲಾದ 313 ಸ್ಥಳಗಳಲ್ಲಿ ಬೋರ್ವೆಲ್ ಕೊರೆಯುವುದು
ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಕುಡಿಯುವ ನೀರನ್ನು ಬಳಸುವಂತೆ ಮತ್ತು ಕುಡಿಯದ ಉದ್ದೇಶಗಳಿಗಾಗಿ ಸಂಸ್ಕರಿಸಿದ ನೀರಿನ ಬಳಕೆ ಮಾಡುವಂತೆ ಜಾಗೃತಿ ಮೂಡಿಸುವುದು.