Log In
BREAKING NEWS >
Nandini Milk: ಕೆಎಂಎಫ್ ನಂದಿನಿ ಮಿಲ್ಕ್ ಹೊಸ ದಾಖಲೆ​​: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ....

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮಹಾದೇವಪ್ಪ ನಕಾರ: ದರ್ಶನ್ ಧ್ರುವನಾರಾಯಣಗೆ ಮಣೆ; ರೇಸ್ ನಲ್ಲಿ ಸುನೀಲ್ ಬೋಸ್!

ಮೈಸೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೆಲ್ಲುವ ಅಭ್ಯರ್ಥಿಗಳ ಪಟ್ಟಿ ಮಾಡಲು ಆರಂಭಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ಹಳೇ ಮೈಸೂರು ಭಾಗದಲ್ಲಿ ಗರಿಷ್ಠ ಸಂಖ್ಯೆಯ ಸೀಟುಗಳಿಸಿದ, ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳನ್ನು ತಮ್ಮ ಕೈವಶ ಮಾಡಿಕೊಳ್ಳಲು ಅವರು ಉತ್ಸುಕರಾಗಿದ್ದಾರೆ.

ಚಾಮರಾಜನಗರ ಕ್ಷೇತ್ರದಿಂದ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಸೇರಿದಂತೆ ಕೆಲವು ಸಚಿವರು ಸ್ಪರ್ಧಿಸಬೇಕೆಂದು ಕಾಂಗ್ರೆಸ್ ನಾಯಕತ್ವ ಬಯಸಿದೆ. ಚಾಮರಾಜನಗರ ಕ್ಷೇತ್ರದ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದ ಹಿರಿಯ ನಾಯಕ ಮಹದೇವಪ್ಪ ಪರ ಸಮೀಕ್ಷೆ ವರದಿಗಳು ಬಂದಿವೆ ಎಂದು ತಿಳಿದು ಬಂದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಂಜನಗೂಡು ಅಥವಾ ಟಿ ನರಸೀಪುರದಿಂದ ಟಿಕೆಟ್ ಸಿಗದ ಕಾರಣ ಅವರ ಪುತ್ರ ಹಾಗೂ ಯುವ ಕಾಂಗ್ರೆಸ್ ಮುಖಂಡ ಸುನೀಲ್ ಬೋಸ್ ಲೋಕಸಭೆ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಮಹದೇವಪ್ಪ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಗಟ್ಟಿಯಾಗಿ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯಗೆ ಹೊಸ ಸಂಕಷ್ಟ ಎದುರಾಗಿದ್ದು, ಮತ್ತೊಬ್ಬ ಅಭ್ಯರ್ಥಿಯನ್ನು ಹುಡುಕಬೇಕಿದೆ. ಮಹದೇವಪ್ಪ ಅವರು 1980 ರ ದಶಕದಲ್ಲಿ ತಮ್ಮ ಜನತಾ ಪಕ್ಷದ ದಿನಗಳಿಂದ ಸಿದ್ದರಾಮಯ್ಯ ಅವರ ಆಪ್ತರಾಗಿದ್ದರು, ಆದರೆ ಈಗ ಇಬ್ಬರ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ. ಪಕ್ಷದಲ್ಲಿ ಇನ್ನೂ ಹಲವು ಜನಪ್ರಿಯ ನಾಯಕರಿದ್ದು, ಅವರನ್ನು ಕಣಕ್ಕಿಳಿಸಬೇಕು ಎಂದು ಮಹದೇವಪ್ಪ ಸೂಚಿಸಿದ್ದಾರೆ.

ಬಿ.ಆರ್.ಅಂಬೇಡ್ಕರ್ ಅವರ ಪುಣ್ಯತಿಥಿ ಹಾಗೂ ಚಿತ್ರದುರ್ಗದಲ್ಲಿ ದಲಿತ ಸಮಾವೇಶದ ನಿಮಿತ್ತ ಮಹಾಪರಿನಿರ್ವಾಣ ದಿವಸ್ ಆಯೋಜನೆಯಲ್ಲಿ ಮಹಾದೇವಪ್ಪ ಪ್ರಮುಖ ಪಾತ್ರ ವಹಿಸಿದ್ದರು, ಜೊತೆಗೆ ಬೆಂಗಳೂರಿನಲ್ಲಿ ಸಂವಿಧಾನ ಜಾಗೃತಿ ಸಮಾವೇಶವನ್ನು ಆಯೋಜಿಸಿದ್ದಕ್ಕಾಗಿ, ದೇಶದಾದ್ಯಂತ ವಿಚಾರವಾದಿಗಳು, ದಲಿತರು, ಪ್ರಗತಿಪರ ಚಿಂತಕರ ಮೆಚ್ಚುಗೆಗೆ ಮಹಾದೇವಪ್ಪ ಪಾತ್ರರಾಗಿದ್ದಾರೆ. .

ಹಿರಿಯ ನಾಯಕ ವಿ.ಶ್ರೀನಿವಾಸ ಪ್ರಸಾದ್ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಕಾಂಗ್ರೆಸ್ ಮುಖಂಡ ಆರ್.ಧ್ರುವನಾರಾಯಣ ಸಾವನ್ನಪ್ಪಿದ್ದಾರೆ, ಹೀಗಾಗಿ ಮಹದೇವಪ್ಪ ಅವರು ರಾಜ್ಯ ರಾಜಕಾರಣದಲ್ಲಿ ಮುಂದುವರಿಯಬೇಕೆಂದು ದಲಿತ ಸಮುದಾಯ ಬಯಸುತ್ತಿದೆ. ಒಂದು ವೇಳೆ ಅವರು ರಾಷ್ಟ್ರ ರಾಜಕಾರಣಕ್ಕೆ ತೆರಳಿದರೆ ನಾಯಕತ್ವದ ಕೊರೆತೆ ಉಂಟಾಗುತ್ತದೆ ಎಂಬ ಆತಂಕ ಎದುರಾಗಿದೆ.

ಮಹದೇವಪ್ಪ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಸಮುದಾಯದವರಿಗೆ ಮನವರಿಕೆ ಮಾಡಿಕೊಡಲು ಪಕ್ಷಕ್ಕೆ ಸಾಧ್ಯವಾಗುವುದಿಲ್ಲ ಎಂಬ ಭಯ ಪಕ್ಷದ ಒಳಗಿನವರು ಮತ್ತು ದಲಿತ ಮುಖಂಡರಲ್ಲಿದೆ. ಮಹದೇವಪ್ಪ ಅವರು ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಸೇವೆ ಸಲ್ಲಿಸಬೇಕು ಮತ್ತು ಇತರ ಹಿರಿಯ ಶಾಸಕರಿಗೆ ಸಚಿವ ಸ್ಥಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕಾಂಗ್ರೆಸ್ ಬಯಸಿದೆ.

ಇನ್ನು ಮಹದೇವಪ್ಪ ಅವರ ಸೇವೆ ರಾಜ್ಯಕ್ಕೆ ಬೇಕಿಲ್ಲ ಎಂದು ಸಿಎಂ ಹಾಗೂ ಡಿಸಿಎಂ ಹೇಳಿಕೆ ನೀಡಿದರೆ ಮಹದೇವಪ್ಪ ಸ್ಪರ್ಧಿಸಬಹುದು ಎಂದೂ ತಿಳಿದುಬಂದಿದೆ. ಈ ಮಧ್ಯೆ, ಮಹದೇವಪ್ಪ ಹಿಂದೆ ಸರಿಯುತ್ತಿರುವುದರಿಂದ ಯಿಂದ ಬಿ.ಸೋಮಶೇಖರ್, ಮಾಜಿ ಸಂಸದ ಶಿವಣ್ಣ, ಮಾಜಿ ಶಾಸಕ ನಂಜುಂಡಸ್ವಾಮಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮತ್ತಿತರರು ಕಣಕ್ಕೆ ಇಳಿಯಲು ಮುಂದಾಗಿದ್ದಾರೆ.

ಶಿವಕುಮಾರ್ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ ಅವರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ದರ್ಶನ್ ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ತೆರಳುವ ಆಸಕ್ತಿ ಇಲ್ಲ ಎಂದು ಹೇಳಲಾಗಿದೆ, ಆದರೆ ಧ್ರುವನಾರಾಯಣ ಅವರ ಸಾವಿನ ನಂತರದ ಅನುಕಂಪದ ಅಂಶದ ಲಾಭ ಪಡೆಯಲು ಪಕ್ಷ ಮುಂದಾಗಿದೆ. ಸಿದ್ದರಾಮಯ್ಯ ಅವರು ಮಹದೇವಪ್ಪ ಅವರನ್ನು ಕಣಕ್ಕಿಳಿಸಲು ಮೇಲುಗೈ ಸಾಧಿಸಬಹುದು ಅಥವಾ ಎಲ್ಲ ಸಮುದಾಯಗಳಿಗೆ ಒಪ್ಪಿಗೆಯಾಗುವ ಅಭ್ಯರ್ಥಿಯನ್ನು ಆಯ್ಕೆ ಮಾಡಬಹುದು. ಅಭ್ಯರ್ಥಿಯನ್ನು ನಿರ್ಧರಿಸಲು ಸ್ಥಳೀಯ ಶಾಸಕರು ಮತ್ತು ಮುಖಂಡರು ಸಿದ್ದರಾಮಯ್ಯ ಅವರಿಗೆ ಅಧಿಕಾರ ನೀಡಿದ್ದಾರೆ.

No Comments

Leave A Comment