ಸಿಲ್ಕ್ಯಾರಾ ಸುರಂಗ ಘಟನೆ: ಮಗನ ಬರುವಿಕೆಗೆ ಕಾದು ಕಾದು ರಕ್ಷಣೆಗೂ ಕೆಲ ಗಂಟೆಗಳ ಮುನ್ನ ಪ್ರಾಣ ಬಿಟ್ಟ ತಂದೆ
ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಮಂದಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. 17 ದಿನಗಳ ನಿರಂತರ ಕಾರ್ಯಾಚರಣೆ ಅಂತೂ ನಿನ್ನೆ ಯಶಸ್ವಿಯಾಗಿತ್ತು.
ಆದರೆ 41 ಕಾರ್ಮಿಕರಲ್ಲಿ ಒಬ್ಬನ ತಂದೆ ತನ್ನ ಮಗನನ್ನು ಸ್ಥಳಾಂತರಿಸುವ ಕೆಲವೇ ಗಂಟೆಗಳ ಮುನ್ನ ‘ಆತಂಕದಿಂದ’ ನಿಧನರಾಗಿದ್ದಾರೆ. ಈ ಬಗ್ಗೆ ಅವರ ಕುಟುಂಬದವರು ಮಾಹಿತಿ ನೀಡಿದ್ದಾರೆ.
ಜಾರ್ಖಂಡ್ನ ನಿವಾಸಿ 70 ವರ್ಷದ ಬರ್ಸಾ ಮುರ್ಮು ಅವರ ಮಗ ಸುರಂಗದಿಂದ ಹೊರಬರುವ ಕೆಲವೇ ಗಂಟೆಗಳ ಮೊದಲು ಸಾವನ್ನಪ್ಪಿದ್ದಾರೆ. ನವೆಂಬರ್ 12ರಂದು ಸುರಂಗ ಕುಸಿತದ ಸುದ್ದಿ ಕೇಳಿದ ನಂತರ ಮುರ್ಮು ಅವರು ತಮ್ಮ ಮಗ ಭಕ್ತು ಬಗ್ಗೆ ಚಿಂತಿತರಾಗಿದ್ದರು ಎಂದು ಅವರ ಕುಟುಂಬ ಸದಸ್ಯರು ಬುಧವಾರ ತಿಳಿಸಿದ್ದಾರೆ.
ಪೂರ್ವ ಸಿಂಗ್ಭೂಮ್ ಜಿಲ್ಲೆಯ ಬಹ್ದಾ ಗ್ರಾಮದ ನಿವಾಸಿ ಮುರ್ಮು ಮಂಗಳವಾರ ಬೆಳಿಗ್ಗೆ 8 ಗಂಟೆಗೆ ತನ್ನ ಹಾಸಿಗೆಯ ಮೇಲೆ ಕುಳಿತಿದ್ದಾಗಲೇ ಮೃತಪಟ್ಟಿದ್ದಾರೆ. ಮುರ್ಮು ಬಹುಶಃ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.
ಎಪ್ಪತ್ತರ ಹರೆಯದ ಮುರ್ಮು ಕೊನೆಯುಸಿರೆಳೆದಾಗ ಮುರ್ಮು ಅವರ ಅಳಿಯ ಥಕರ್ ಹಂಸ್ದಾ ಅಲ್ಲಿಯೇ ಇದ್ದರು. ಮಗನ ಚಿಂತೆಯಲ್ಲಿ ಇದ್ದಕ್ಕಿದ್ದ ಹಾಗೆ ಮಂಚದಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದರು. ಮುರ್ಮು ತನ್ನ ಮಗನ ಮಾಹಿತಿಗಾಗಿ ಕಾತರದಿಂದ ಕಾಯುತ್ತಿದ್ದರು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಸಂತ್ರಸ್ತನ ಮನೆಗೆ ಭೇಟಿ ನೀಡಿದ ದುಮಾರಿಯಾ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಸಂಜೀವನ್ ಓರಾನ್, ಸಾವಿಗೆ ಕಾರಣ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.
ಜಾರ್ಖಂಡ್ನ ಇತರ 14 ಕಾರ್ಮಿಕರೊಂದಿಗೆ ಭಕ್ತು ಏಮ್ಸ್ ರಿಷಿಕೇಶದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲಿ ಅವರು ಇತರರೊಂದಿಗೆ ಆರೋಗ್ಯ ತಪಾಸಣೆಗೆ ಬಂದಿದ್ದರು. ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಜಾರ್ಖಂಡ್ ಕಾರ್ಮಿಕ ಕಾರ್ಯದರ್ಶಿ ರಾಜೇಶ್ ಕುಮಾರ್ ಶರ್ಮಾ, “ಉತ್ತರಾಖಂಡ ಸರ್ಕಾರವು ಕಾರ್ಮಿಕರ ಮೇಲೆ ನಿಗಾ ಇರಿಸಿದೆ. ಅವರು ಆಸ್ಪತ್ರೆಯಿಂದ ಬಿಡುಗಡೆಯಾದ ತಕ್ಷಣ ನಾವು ಅವರನ್ನು ವಿಮಾನದ ಮೂಲಕ ರಾಂಚಿಗೆ ಕರೆದೊಯ್ಯುತ್ತೇವೆ” ಎಂದು ಹೇಳಿದರು.
ಉತ್ತರಾಖಂಡದಲ್ಲಿ ನಿರ್ಮಾಣ ಹಂತದಲ್ಲಿರುವ ರಸ್ತೆ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಯಶಸ್ವಿ ಕಾರ್ಯಾಚರಣೆ ಮಂಗಳವಾರ ರಾತ್ರಿ ಕೊನೆಗೊಂಡಿತು. ಉತ್ತರಾಖಂಡದ ಚಾರ್ ಧಾಮ್ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಒಂದು ಭಾಗವು ನವೆಂಬರ್ 12 ರಂದು ಕುಸಿದು ಬಿದ್ದಿತು. ನಂತರ ರಕ್ಷಣಾ ಕಾರ್ಯಾಚರಣೆ 17 ದಿನಗಳ ಕಾಲ ನಡೆಯಿತು.