Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ನೇಜಾರು ನಾಲ್ವರ ಹತ್ಯೆ: ಮಾತು ಬಿಟ್ಟಿದ್ದಕ್ಕೆ ಸ್ಕೆಚ್ ಹಾಕಿ ಅಯ್ನಾಸ್ ಹತ್ಯೆ: ಉಡುಪಿ ಎಸ್​ಪಿ

ಉಡುಪಿ, ನ.23: ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ (Udupi Four Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗಲೆ ತನಿಖೆ ಮುಂದುವರಿದಿದ್ದು, ಸಾಕಷ್ಟು ವಿಚಾರಗಳು ಈಗಾಗಲೇ ಬಹಿರಂಗವಾಗಿವೆ. ಇದೀಗ, ತನ್ನೊಂದಿಗೆ ಮಾತು ಬಿಟ್ಟಿದ್ದಕ್ಕೆ ಸ್ಕೆಚ್ ಹಾಕಿ ಅಯ್ನಾಸ್​ಳನ್ನು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಎಸ್​ಪಿ ಡಾ.ಅರುಣ್, ತನಿಖೆಗೆ ಬೇಕಾದ ಎಲ್ಲಾ ದಾಖಲಾತಿ ಪ್ರಕ್ರಿಯೆ ಮಾಡಿದ್ದೇವೆ. ಅಯ್ನಾಸ್ ಮತ್ತು ಅರೋಪಿ ಪ್ರವೀಣ್​ಗೆ ಎಂಟು ತಿಂಗಳಿಂದ ಪರಿಚಯ ಇತ್ತು. ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಇಬ್ಬರ ಮಧ್ಯೆಯಲ್ಲಿ ಗೆಳೆತನ ಇತ್ತು. ಅರೋಪಿ ಪ್ರವೀಣ್ ಆಯ್ನಾಸ್​ಗೆ ಹಲವಾರು ಬಾರಿ ಸಹಾಯ ಮಾಡಿದ್ದನು ಎಂದು ತಿಳಿಸಿದ್ದಾರೆ.

ಅಲ್ಲದೆ, ಅಯ್ನಾಸ್ ಪ್ರವೀಣ್ ಜೊತೆ ತಿಂಗಳಿಂದ ಸರಿಯಾಗಿ ಮಾತನಾಡುತ್ತಿರಲಿಲ್ಲ. ಇದೇ ಕಾರಣಕ್ಕೆ ಕೊಲೆ ಮಾಡಬೇಕೆಂದು ಪ್ರವೀಣ್ ಪೂರ್ವ ಸಿದ್ಧತೆ ಮಾಡಿಕೊಂಡಿದ್ದ. ಕೊಲೆ ಮಾಡುವ ದಿನ ಅವನು ಟೋಲ್​ಗೇಟ್ ಬಳಿ ಕಾರು ಇಟ್ಟು ಬೇರೆ ಬೇರೆ ವಾಹನದಲ್ಲಿ ಡ್ರಾಪ್ ಪಡೆದುಕೊಂಡು ತೃಪ್ತಿನಗರಕ್ಕೆ ಹೋಗಿದ್ದಾನೆ.

ಹೀಗೆ ಅಯ್ನಾಸ್ ಮನೆಗೆ ನುಗ್ಗಿದ ಪ್ರವೀಣ್, ಆರಂಭದಲ್ಲಿ ಚಾಕುವಿನಿಂದ ಇರಿದು ಅಯ್ನಾಸ್ ಹತ್ಯೆ ಮಾಡಿ ಬಳಿಕ ಸಾಕ್ಷಿ ನಾಶಗೊಳಿಸಲು ಮನೆಯಲ್ಲಿದ್ದ ಹಸೀನಾ, ಅಫ್ನಾನ್, ಆಸಿಂ ಎಂಬವರನ್ನು ಕೊಲೆ ಮಾಡಿದ್ದಾನೆ. ಕೃತ್ಯ ಎಸಗಿದ ನಂತರ ಬೇರೆ ಬೇರೆ ವಾಹನದಲ್ಲಿ ದಕ್ಷಿನ ಕನ್ನಡ ಜಿಲ್ಲೆಗೆ ಪರಾರಿಯಾಗಿದ್ದಾನೆ. ಕೈ ಗಾಯಕ್ಕೆ ಚಿಕಿತ್ಸೆ ಪಡೆದು, ಚಾಕು ಮನೆಯಲ್ಲೇ ಇಟ್ಟು ಹೆಂಡತಿಯ ಸಂಬಂಧಿಕರ ಮನೆಗೆ ಹೋಗಿದ್ದಾನೆ ಎಂದರು.

ಆರೋಪಿಗೆ ಆಶ್ರಯ ನೀಡಿದ ವ್ಯಕ್ತಿಯ ವಿಚಾರಣೆ

ಕುಡುಚಿಯಲ್ಲಿ ಆರೋಪಿಗೆ ಆಶ್ರಯ ನೀಡಿದ್ದ ವ್ಯಕ್ತಿಯನ್ನು ವಿಚಾರಣೆ ಮಾಡಿದ್ದೇವೆ. ಹೆಚ್ಚುವರಿ ಮಾಹಿತಿ ಬೇಕಾಗಿದ್ದರೆ ಅವರಿಂದ ಮಾಹಿತಿ ಪಡೆಯುತ್ತೇವೆ ಎಂದು ಎಸ್​ಪಿ ಅರುಣ್ ಹೇಳಿದ್ದಾರೆ. ಅಲ್ಲದೆ, ಕೈಗೆ ಗಾಯವಾಗಿರುವ ಬಗ್ಗೆ ಪತ್ನಿ ಪ್ರಶ್ನಿಸಿದಾಗ ಸುಳ್ಳು ಹೇಳಿ ದಾರಿ ತಪ್ಪಿಸಿದ್ದಾನೆ. ನಾಲ್ವರನ್ನು ಕೊಲೆಗೈದು ಚೂರಿಯನ್ನು ಅಡುಗೆ ಮನೆಯಲ್ಲಿ ಇಟ್ಟಿದ್ದಾನೆ. ಪತ್ನಿಗೆ ಸಂಶಯ ಬರದ ಹಾಗೆ ಮನೆಯಲ್ಲಿ ಪ್ರವೀಣ್ ವರ್ತಿಸಿದ್ದನು ಎಂದರು.

ಉಡುಪಿ ನಗರದಲ್ಲಿ ಹೆಚ್ಚುವರಿ ಸಿಸಿಟಿವಿಗಳ ಅಳವಡಿಕೆ

ಉಡುಪಿ ನಗರದಲ್ಲಿ ಹೆಚ್ಚುವರಿ ಸಿಸಿಟಿವಿಗಳ ಅಳವಡಿಕೆ ಮಾಡಿದ್ದೇವೆ. ಜಿಲ್ಲೆಯ ಎಲ್ಲಾ ಗಡಿಪ್ರದೇಶದಲ್ಲಿ ಸಿಸಿಟಿವಿ ಕಣ್ಗಾವಲು ಇರಿಸುತ್ತೇವೆ. ಆರೋಪಿ ಪ್ರವೀಣ್ ಮತ್ತು ಅಯ್ನಾಝ್ ಕುಟುಂಬ ಫ್ಯಾಮಿಲಿ ತನಿಖೆಗೆ ಬಹಳ ಸಹಕಾರ ಕೊಟ್ಟಿದ್ದಾರೆ. ನೂರ್ ಮೊಹಮ್ಮದ್ ಕುಟುಂಬ ಬಹಳ ನೋವಲ್ಲಿದ್ದಾರೆ. ವಿಶೇಷ ಪಿ.ಪಿ ನೇಮಕಕ್ಕೆ ನಾವು ಸಹಕಾರ ನೀಡುತ್ತೇವೆ. ಫಾಸ್ಟ್ ಟ್ರ್ಯಾಕ್ ಕೋರ್ಟ್ ಬಗ್ಗೆ ಕುಟುಂಬ ಮನವಿ ನೀಡಿದೆ ಎಂದು ಎಸ್​ಪಿ ಅರುಣ್ ತಿಳಿಸಿದರು.

ತನಿಖೆಗೆ ಒಟ್ಟು 11 ತಂಡ ರಚನೆ ಮಾಡಿದ್ದೆವು. ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಎಲ್ಲಾ ಕಡೆಯಿಂದ ಮಾಹಿತಿ ಬಂದ ಕಾರಣ ಎಲ್ಲವನ್ನು ತನಿಖೆ ಮಾಡಿದ್ದೇವೆ. ಹಸೀನಾಗೆ ಆರ್ಥಿಕ ಮೋಸವಾದ ಬಗ್ಗೆ ಮಾಹಿತಿ ಸಿಕ್ಕಿದೆ. ಕುಟುಂಬದಿಂದ ದೂರು ಪಡೆದುಕೊಂಡು ತನಿಖೆ ಮಾಡುತ್ತೇವೆ. ನಾಲ್ವರ ಕೊಲೆ ಪ್ರಕರಣ ದೊಡ್ಡ ಸವಾಲಾಗಿತ್ತು. ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾದ ಪ್ರಕರಣ ಇದಾಗಿತ್ತು. ನಾವು ತಂಡವಾಗಿ ಕೆಲಸ ಮಾಡಿ ಆರೋಪಿಯನ್ನು ಬಂಧಿಸಿದ್ದೇವೆ. ಆರೋಪಿಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಪೊಲೀಸರನ್ನು ಬಂದೋಬಸ್ತ್​ಗೆ ನಿಯೋಜನೆ ಮಾಡಲಾಗಿದೆ ಎಂದರು.

ಹತ್ಯೆ ಪ್ರಕರಣ ಸಂಬಂಧ ಆರೋಪಿ ವಿರುದ್ಧ ಚಾರ್ಜ್​ ಶೀಟ್ ಸಲ್ಲಿಕೆಗೆ ಇನ್ನೂ 70-80 ದಿನಗಳು ಇವೆ. ಎಲ್ಲಾ ಸಾಕ್ಷಿಗಳ ಸಂಗ್ರಹ ಮಾಡುತ್ತಿದ್ದೇವೆ. ಸುಮಾರು 50 ಪೊಲೀಸರು ಇದರ ಹಿಂದೆ ಕೆಲಸ ಮಾಡಿದ್ದಾರೆ. ಆರೋಪಿ ಪತ್ತೆ ಮಾಡಿದ ಪೊಲೀಸರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದರು.

ಆ್ಯಪ್ ಲೊಕೇಶನ್ ಮೂಲಕ ಆಯ್ನಾಸ್ ಮನೆಯನ್ನು ಪ್ರವೀಣ್ ಕಂಡುಹುಡುಕಿದ್ದಾನೆ. ಆರೋಪಿ ಕೃತ್ಯಕ್ಕೂ ಮೊದಲು ಮನೆಗೆ ಬಂದಿರಲಿಲ್ಲ. ಹೆಚ್ಚುವರಿ ತಾಂತ್ರಿಕ ಮಾಹಿತಿಗಳನ್ನು ನಾವು ಕೊಡುವುದಿಲ್ಲ. ಚಾರ್ಜ್ ಶೀಟ್​ನಲ್ಲಿ ನ್ಯಾಯಾಲಯಕ್ಕೆ ಎಲ್ಲಾ ಮಾಹಿತಿಗಳನ್ನು ಒಪ್ಪಿಸುತ್ತೇವೆ ಎಂದು ಅರುಣ್ ಹೇಳಿದ್ದಾರೆ.

No Comments

Leave A Comment