ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಶರಣರು ನುಡಿದಂತೆ ನಡೆದರು: ನಮ್ಮ ಸರ್ಕಾರ ಬಸವ ತತ್ವದಂತೆ ಸಾಗುತ್ತಿದೆ; ಸಿಎಂ ಸಿದ್ದರಾಮಯ್ಯ

ಮೈಸೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಸವಣ್ಣನವರ  ಧನೆಯಿಂದ ಪ್ರಭಾವಿತವಾಗಿವೆ, 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ತತ್ವ ಸಿದ್ಧಾಂತದಲ್ಲಿ ನಮಗೆ ನಂಬಿಕೆಯಿದ್ದು, ಆ ಮಾರ್ಗದಲ್ಲಿ ನಡೆಯಲು ತಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಆಯೋಜಿಸಿದ್ದ ಬಸವ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು,  2013ರ ಬಸವ ಜಯಂತಿಯಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಸ್ಮರಿಸಿದ ಸಿದ್ದರಾಮಯ್ಯ, ಸಮಾಜವನ್ನು ಜಾತಿಯ ಆಧಾರದ ಮೇಲೆ ಛಿದ್ರಗೊಳಿಸದೆ ವಿಶ್ವಮಾನವರಾಗಬೇಕು ಎಂದರು.

‘ಬಸವ ಜಯಂತಿಯಂದೇ ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೆ. ಶರಣರು ನುಡಿದಂತೆ ನಡೆದವರು. ನಾನೂ ಕೊಟ್ಟ ವಚನಗಳನ್ನು ಈಡೇರಿಸಿ ನುಡಿದಂತೆ ನಡೆಯುತ್ತಿದ್ದೇನೆ. ನಮ್ಮ ಗ್ಯಾರಂಟಿ ಕಾರ್ಯಕ್ರಮಗಳು ಎಲ್ಲ ಧರ್ಮ ಹಾಗೂ ಜಾತಿಯವರಿಗೂ ಅನ್ವಯಿಸುತ್ತವೆ; ಎಲ್ಲರಿಗೂ ಅನುಕೂಲವಾಗಿವೆ’ ಎಂದರು.

ಬಸವಾದಿ ಶರಣರು ಮೇಲ್ವರ್ಗದವರ ಪರವಾಗಿ ಕೆಲಸ ಮಾಡಲಿಲ್ಲ. ಶೂದ್ರ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿದರು. ತಳ ಸಮುದಾಯದ ಅಲ್ಲಮಪ್ರಭು ಅನುಭವ ಮಂಟಪದ ಅಧ್ಯಕ್ಷರಾಗಿದ್ದರು. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು 12ನೇ ಶತಮಾನದಲ್ಲೇ ಜಾರಿಗೆ ತಂದವರು ಬಸವಾದಿ ಶರಣರು. ಆ ಕಾಲದಲ್ಲೇ ಅಂತರ್ಜಾತಿ ವಿವಾಹ ಮಾಡಿಸಿದವರು ಬಸವಣ್ಣ. ಈ ಕಾರಣಕ್ಕೇ ಬಸವಣ್ಣನವರ ವಿರುದ್ಧ ಬಿಜ್ಜಳನನ್ನು ಎತ್ತಿಕಟ್ಟಿದರು ಎಂದು ವಿವರಿಸಿದರು.

12ನೇ ಶತಮಾನದ ಶರಣರ ಆಶಯಗಳು ಇನ್ನೂ ಈಡೇರಿಲ್ಲ. ಸ್ವಾತಂತ್ರ್ಯ ಬಂದು 76 ವರ್ಷಗಳ ನಂತರವೂ ಪ್ರಜಾಪ್ರಭುತ್ವದ, ಸಂವಿಧಾನದ ಆಶಯಗಳು ಈಡೇರಿಲ್ಲ. ಅಸಮಾನತೆ ಹೋಗಿಲ್ಲ. ಈ ಬಗ್ಗೆ ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನ ಜಾರಿ ಸಂದರ್ಭದಲ್ಲೇ ಎಚ್ಚರಿಸಿದ್ದರು. ಅಂಬೇಡ್ಕರ್ ಅವರು ಕೊಟ್ಟ ಎಚ್ಚರಿಕೆಯನ್ನೇ 12ನೇ ಶತಮಾನದಲ್ಲೇ ಬಸವಣ್ಣ ಮತ್ತು ಬಸವಾದಿ ಶರಣರು ಕೊಟ್ಟಿದ್ದರು ಎಂದು ನುಡಿದರು.

ಸಮಾಜದಲ್ಲಿರುವ ಅಸಮಾನತೆ ಹೋಗಬೇಕು. ಇಲ್ಲದಿದ್ದರೆ ಅವಮಾನ, ಅನ್ಯಾಯ ಹಾಗೂ ಶೋಷಣೆಗೆ ಒಳಗಾದವರು ರಾಜಕೀಯ ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸ ಮಾಡುತ್ತಾರೆ ಎಂದು ಬಸವಾದಿ ಶರಣರು ಹಾಗೂ ಅಂಬೇಡ್ಕರ್ ಹೇಳಿದ್ದಾರೆ. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು. ಮೈಸೂರಿನಲ್ಲಿ ನಿರ್ಮಿಸಲಿರುವ ಬಸವ ಭವನಕ್ಕೆ ಮುಂದಿನ ಬಜೆಟ್‌ನಲ್ಲಿ ಅನುದಾನ ಒದಗಿಸಲು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.

No Comments

Leave A Comment