Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಮಡಿಕೇರಿ: ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ; ನೆಲಕ್ಕುರುಳಿದ ಜನರಲ್ ತಿಮ್ಮಯ್ಯ ಪ್ರತಿಮೆ

ಮಡಿಕೇರಿ: ಸೋಮವಾರ ನಸುಕಿನ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದಿವಂಗತ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಪ್ರತಿಮೆಗೆ ಧಕ್ಕೆಯಾಗಿದೆ. ಹಿಂದಿನ ವರ್ಷಗಳಲ್ಲಿ ಸಾಕಷ್ಟು ಹೋರಾಟದ ನಂತರ ಸ್ಥಾಪಿಸಲಾದ ಈ ಪ್ರತಿಮೆ ಸುಮಾರು 50 ವರ್ಷ ಹಳೆಯದು. ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್‌ ಪ್ರತಿಮೆ ಇದ್ದ ವೃತ್ತಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅದು ಕೆಳಗೆ ಬಿದ್ದಿದೆ.

ಬೆಳಗ್ಗೆ 5.45ರ ಸುಮಾರಿಗೆ ಮಡಿಕೇರಿಯಿಂದ ಮಂಗಳೂರಿಗೆ ತೆರಳಬೇಕಿದ್ದ ಕೆಎಸ್‌ಆರ್‌ಟಿಸಿ ಬಸ್, ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ಡಿಪೋದಿಂದ ಬಸ್ ನಿಲ್ದಾಣದ ಕಡೆಗೆ ಹೊರಟಿತು. ಜನರಲ್ ತಿಮ್ಮಯ್ಯ ವೃತ್ತದ ಅಡ್ಡರಸ್ತೆಯಲ್ಲಿ ಪಿಕಪ್ ವಾಹನವೊಂದು ಹಠಾತ್ತನೆ ತಿರುಗಿದ್ದು, ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿ ಪ್ರತಿಮೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನ ಗಾಜು ಒಡೆದಿದ್ದು, ಕಂಡಕ್ಟರ್ ವಾಹನದಿಂದ ಹೊರಕ್ಕೆ ಬಿದ್ದಿದ್ದಾರೆ. ಅದೃಷ್ಟವಶಾತ್ ಬಸ್‌ನಲ್ಲಿ ಪ್ರಯಾಣಿಕರಿಲ್ಲದ್ದರಿಂದ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

 

ನಗರದಲ್ಲಿ ಸ್ಥಾಪಿಸಲಾದ ಮೊದಲ ಪ್ರತಿಮೆಗಳಲ್ಲಿ ಒಂದಾದ ಈ ಪ್ರತಿಮೆಯು ನಗರದ ನಿವಾಸಿಗಳಲ್ಲಿ ಭಾವನಾತ್ಮಕ ಸಂಬಧ ಹೊಂದಿದೆ. ಮಾರ್ಚ್ 20, 1973 ರಂದು ದಿವಂಗತ ಜನರಲ್ ಕೆಎಸ್ ತಿಮ್ಮಯ್ಯ ಅವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಜನವರಿ 1973 ರಲ್ಲಿ ಸೇನೆಯಿಂದ ನಿವೃತ್ತರಾದ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್ಷಾ ಅವರು ಪ್ರತಿಮೆಯನ್ನು ಅನಾವರಣಗೊಳಿಸಿದರು. “ಪ್ರತಿಮೆಯನ್ನು ಸ್ಥಾಪಿಸಲು ನಾವು ನಡೆಸಿದ ಹೋರಾಟವು ಇನ್ನೂ ನನ್ನ ನೆನಪಿನಲ್ಲಿ ಹಸಿರಾಗಿದೆ. ಇದಕ್ಕಾಗಿ ರಾಜ್ಯಕ್ಕೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರೂ ನಮಗೆ ಕೇವಲ 1500 ರೂ.ಗಳನ್ನು ಮಂಜೂರು ಮಾಡಲಾಗಿತ್ತು. ಆದರೆ, ಈ ಅವಧಿಯಲ್ಲಿ ರಾಜ್ಯಪಾಲರ ಆಳ್ವಿಕೆಯನ್ನು ಘೋಷಿಸಲಾಯಿತು ಮತ್ತು ನಾವು ಆಗಿನ ರಾಜ್ಯಪಾಲ ಧರ್ಮವೀರ ಅವರನ್ನು ಸಂಪರ್ಕಿಸಿದಾಗ ಅವರು 30,000 ರೂ. ಮಂಜೂರು ಮಾಡಿದ್ದರು. ಮುಂಬೈ ಮೂಲದ ಖ್ಯಾತ ಕಲಾವಿದ ವಾಗ್ ಅವರು ಈ ಪ್ರತಿಮೆಯನ್ನು ತಯಾರಿಸಿದ್ದಾರೆ’ ಎಂದು ಮಡಿಕೇರಿ ಸಿಎಂಸಿಯ ಅಂದಿನ ಅಧ್ಯಕ್ಷ ಹಾಗೂ ಪ್ರತಿಮೆ ಸ್ಥಾಪನೆಗೆ ಶ್ರಮಿಸಿದ ಪ್ರಮುಖ ವ್ಯಕ್ತಿ ಎಂ.ಸಿ.ನಾಣಯ್ಯ ಸ್ಮರಿಸಿದರು. ಅನಾವರಣ ಸಮಾರಂಭದಲ್ಲಿ ಅಂದಿನ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಎಸ್.ಎಂ.ಕೃಷ್ಣ ಕೂಡ ಭಾಗವಹಿಸಿದ್ದರು.

ಪ್ರತಿಮೆಯ ಹಿಂಭಾಗಕ್ಕೆ ಮತ್ತು ಕೈ ಭಾಗಕ್ಕೆ ಹಾನಿಯಾಗಿದೆ. ಈ ಪ್ರತಿಮೆಯನ್ನು ಜನರಲ್ ತಿಮಯ್ಯ ಮ್ಯೂಸಿಯಂಗೆ ಸ್ಥಳಾಂತರಿಸಲಾಗಿದೆ. ಪ್ರತಿಮೆ ಪುನರ್ ಪ್ರತಿಷ್ಠಾಪನೆ ಕುರಿತು ಡಿಸಿ ಹಾಗೂ ಜನರಲ್ ತಿಮ್ಮಯ್ಯ ಹಾಗೂ ಎಫ್‌ಎಂಕೆಎಂ ಕರಿಯಪ್ಪ ಫೋರಂ ಜತೆ ಚರ್ಚೆ ನಡೆಸಲಾಗುವುದು ಎಂದು ಸಿಎಂಸಿ ಅಧ್ಯಕ್ಷೆ ಅನಿತಾ ಪೂವಯ್ಯ ತಿಳಿಸಿದರು. “ಅಂದಾಜು ವೆಚ್ಚ ಸಿದ್ಧಪಡಿಸಲಾಗುತ್ತಿದೆ ಮತ್ತು ಪ್ರತಿಮೆಯನ್ನು ಮರುಸ್ಥಾಪಿಸಲು ಎಲ್ಲಾ ಇಲಾಖೆಗಳು ಒಟ್ಟಾಗಿ ಕೆಲಸ ಮಾಡುತ್ತವೆ” ಎಂದು ಅವರು ಹೇಳಿದರು.

No Comments

Leave A Comment