Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರಿಂದ ಧ್ವಜಾರೋಹಣ

ಉಡುಪಿ:ಆ 15. ಉಡುಪಿ ಜಿಲ್ಲಾಡಳಿತದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಅಜ್ಜರಕಾಡುವಿನ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಮತ್ತು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಧ್ವಜಾರೋಹಣ ನಡೆಸಿ ಗೌರವ ವಂದನೆ ಸ್ವಿಕರಿಸಿದರು.

ಸ್ವಾತಂತ್ರ ಉತ್ಸವದ ತಮ್ಮ ಸಂದೇಶದಲ್ಲಿ ಮಾತನಾಡಿದ ಉಸ್ತುವಾರಿ ಸಚಿವೆ ಲಕ್ಷ್ಮಿ ​ಹೆಬ್ಬಾಳ್ಕರ್ ಮಾತನಾಡಿ “ದೇಶಾದ್ಯಂತ ಇಂದು ಆಚರಿಸುತ್ತಿರುವ 77 ನೇ ಸ್ವಾತಂತ್ರ್ಯ ಹಬ್ಬದ ಈ ಶುಭ ಸಂದರ್ಭದಲ್ಲಿ, ಅತ್ಯಮೂಲ್ಯವಾದ ಈ ನಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವ ದೀಕ್ಷೆ ತೊಡುವ ದಿನ ಕೂಡ ಇದಾಗಿದೆ. ಭಾರತ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ, ನಮ್ಮ ದೇಶದ ಸ್ವಾತಂತ್ರ್ಯ ಎಂದರೆ ತ್ಯಾಗ, ಬಲಿದಾನಗಳ ಫಲ. ಇಡೀ ಭಾರತವೇ ಬ್ರಿಟಿಷರ ವಿರುದ್ಧ ಹೋರಾಡಿ ದಾಸ್ಯದಿಂದ ಮುಕ್ತವಾಗಿ ಸ್ವಾತಂತ್ರ್ಯ ಪಡೆದುಕೊಂಡಿದ್ದೇವೆ. ನಾವೆಲ್ಲಾ ಇಂದು ದೇಶದ ಉಜ್ವಲ ಭವಿಷ್ಯಕ್ಕಾಗಿ ಕನಸು ಕಟ್ಟಿಕೊಳ್ಳಲು ಇಲ್ಲಿ ಸೇರಿದ್ದೇವೆ. ನಮ್ಮ ಕನಸುಗಳ ಜೊತೆ ಜೊತೆಗೆ ನಮ್ಮ ಮಹಾತ್ಮರ ಕನಸುಗಳು, ಆಶಯಗಳನ್ನ ನನಸಾಗಿಸಲು ನಾವೆಲ್ಲ ಇಂದು ಸಂಕಲ್ಪ ಮಾ​ಡೋಣ” ಎಂದರು.

“ಉಡುಪಿ ಜಿಲ್ಲೆ ಸ್ಥಾಪನೆಯಾಗಿ 25 ವರ್ಷ ಕಳೆದಿದೆ. ಈ ನಮ್ಮ ಜಿಲ್ಲೆಯ ರಮಣೀಯ ಪ್ರಕೃತಿ ಸೌಂದರ್ಯ, ನದಿಗಳು,​ ಕಡಲ ತೀರಗಳು, ಶಿಕ್ಷಣ ಸಂಸ್ಥೆ, ರಾಜ್ಯ, ದೇಶ ಹಾಗೂ ವಿದೇಶಗಳಿಂದಲೂ ಸಹ ಗುರುತಿಸಿಕೊಂಡಿದೆ. ಜಿಲ್ಲೆಯು ಕಡಿಮೆ​ ಅವಧಿಯಲ್ಲಿಯೇ ಹೆಚ್ಚಿನ ಅಭಿವೃದ್ಧಿ ಕಂಡಿದೆ. ಮತ್ತಷ್ಟು ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.​ ಕೋಮು ಸಂಘರ್ಷಕ್ಕೆ ಕಾರಣವಾಗುವ ಜಾತಿ ಧರ್ಮ ಇವುಗಳನ್ನು ಮೀರಿ ನಿಂತು, ಭಾರತೀಯರಾದ ನಾವೆಲ್ಲರೂ ಒಂದೇ ಎಂಬ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕಿದೆ. ಹಾಗಾದಾಗ ಮಾತ್ರ ಭಾರತ ಸ್ವಾತಂತ್ರ್ಯದ 76 ವರ್ಷಗಳ ಕಾಲಘಟ್ಟದಲ್ಲಿ ಸಾರ್ಥಕತೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಎಲ್ಲಾ ಧರ್ಮೀಯರು ಸಹೋದರರಂತೆ ಸಾಮರಸ್ಯದ ಶಾಂತಿಯುತ ಬದುಕನ್ನು ಸಾಗಿಸಲು ನಾವು ಪ್ರಯತ್ನಿಸಬೇಕು. ಶಾಂತಿ ನೆಮ್ಮದಿಗೆ ಭಂಗ ತರುವಂತಹ ಯಾವುದೇ ಕೆಟ್ಟ ಶಕ್ತಿಗಳನ್ನು, ಪ್ರಯತ್ನಗಳನ್ನು ವಿಫಲಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ”.

“ರಾಜ್ಯದಲ್ಲಿ ಇಂದು ಜನಪರವಾಗಿರುವ ಸರ್ಕಾರವಿದೆ. ಸಮೃದ್ದ ಕರ್ನಾಟಕ ನಿರ್ಮಾಣದ ಆಶಯದೊಂದಿಗೆ ನಾಡಿನ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿದೆ. ನಮ್ಮ ಸರ್ಕಾರ ಸಂವಿಧಾನ​ದ ಆಶಯಗಳಂತೆ ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಮೌಲ್ಯಗಳ ಹಾದಿಯಲ್ಲಿ ಕೆಲಸ ಮಾಡಲಿದೆ. ಸಮಾಜದ ದುರ್ಬಲ ವರ್ಗಗಳ ಕಲ್ಯಾಣ, ಪರಿಸರ ಸಂರಕ್ಷಣೆ, ಆರ್ಥಿಕ ಅಭಿವೃದ್ಧಿಗೆ ಉತ್ತೇಜನ, ರೈತರ ಬೆಳೆಗೆ ಸಂಪನ್ಮೂಲಗಳ ನ್ಯಾಯಯುತ ಹಂಚಿಕೆ ಹಾಗೂ ಸಮಾನ ಅವಕಾಶಗಳ ಸೃಜನೆ ಮಾಡುವುದು ನಮ್ಮ ಧ್ಯೇಯವಾಗಿದೆ.

ಉಡುಪಿ ಜಿಲ್ಲೆ ಅತ್ಯಂತ ಬುದ್ದಿವಂತರ ಜಿಲ್ಲೆ ಎನ್ನುವ ಹೆಸರು ಪಡೆದಿದೆ. ಇಲ್ಲಿಯ ಉಸ್ತುವಾರಿ ಸಚಿವೆಯಾಗಿ ಸೇವೆ ಸಲ್ಲಿಸುವ ಅವಕಾಶ ನನಗೆ ಲಭ್ಯವಾಗಿದೆ. ಕಡಲು ಕೊರೆತ, ಕಾಲು ಸಂಕ ಸೇರಿದಂತೆ ಇಲ್ಲಿನ ಹಲವಾರು ವಿಶಿಷ್ಟ ಸಮಸ್ಯೆಗಳು, ಬೇಡಿಕೆಗಳು ನನ್ನ ಗಮನದಲ್ಲಿವೆ. ಅವುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಾನು ಎಲ್ಲ ರೀತಿಯ ಕ್ರಮ ವಹಿಸುತ್ತೇನೆ. ಅಭಿವೃದ್ಧಿಯ ಮೂಲಕ ಉಡುಪಿ ಜಿಲ್ಲೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪ ಮಾಡುತ್ತೇನೆ. ಇದಕ್ಕೆ ಶ್ರೀಕೃಷ್ಣ ಪರಮಾತ್ಮನ ಆಶಿರ್ವಾದ ಮತ್ತು ತಮ್ಮೆಲ್ಲರ ಸಹಕಾರವನ್ನು ಬಯಸುತ್ತೆನೆ” ಎಂದರು.

ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ ಎಚ್, ಪೋಲಿಸ್ ವರಿಷ್ಟಾದಿಕಾರಿ ಹಾಕೆ ಅಕ್ಷಯ್ ಮಚೇಂದ್ರ ಮತ್ರು ಇತರರು ಉಪಸ್ಥಿತರಿದ್ದರು.

No Comments

Leave A Comment