Log In
BREAKING NEWS >
Nandini Milk: ಕೆಎಂಎಫ್ ನಂದಿನಿ ಮಿಲ್ಕ್ ಹೊಸ ದಾಖಲೆ​​: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ....

ಸಿಡಿ ಭಯದಿಂದ ಸ್ಟೇ ತಂದೋರಿಗೆ, 80 ಪ್ರಕರಣದಲ್ಲಿ ಭಾಗಿಯಾದವರಿಗೆ ಟಿಕೆಟ್ ಕೊಟ್ರು; ನನಗೆ ‘ಕೈ’ ಕೊಟ್ರು: ಶೆಟ್ಟರ್ ವಾಗ್ದಾಳಿ

ಹುಬ್ಬಳ್ಳಿ: ನಿನ್ನೆ ಮೊನ್ನೆ ಪಕ್ಷಕ್ಕೆ ಬಂದೋರಿಗೆ, ಕ್ರಿಮಿನಲ್‌ಗಳಿಗೆ ಟಿಕೆಟ್ ಕೊಟ್ಟಿದ್ದೀರಿ. ನನಗೆ ಮಾತ್ರ ಟಿಕೆಟ್ ಸಿಗಲಿಲ್ಲ. ನನಗೆ ಟಿಕೆಟ್ ಕೈ ತಪ್ಪಿದಾಗ ಯಾರೊಬ್ಬರೂ ನನ್ನನ್ನು ಮಾತನಾಡಿಸಲಿಲ್ಲ. ಗೌರವದಿಂದ ನಡೆಸಿಕೊಳ್ಳಲಿಲ್ಲ ಎಂದಷ್ಟೇ ನಾನು ಬಿಜೆಪಿ ಬಿಟ್ಟು ಹೊರಬಂದೆ ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅಳಲು ತೋಡಿಕೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಟಿಕೆಟ್ ದೊರಕದ ಕಾರಣಕ್ಕಾಗಿ ನಾನು ರೆಬಲ್ ಆದಮೇಲೆ ರಾಜ್ಯಸಭಾ ಸದಸ್ಯನನ್ನಾಗಿ ಮಾಡುತ್ತೇವೆ, ಕೇಂದ್ರದಲ್ಲಿ ದೊಡ್ಡ ಹುದ್ದೆ ಕೊಡುತ್ತೇವೆ ಎಂದು ಆಮಿಷವೊಡ್ಡಿದರು. ಆದರೆ, ತತ್ವ ಮತ್ತು ಸಿದ್ಧಾಂತದ ಬಗ್ಗೆ ಮಾತನಾಡುವವರು, ಸಿಡಿ ಭಯದಿಂದ ಕೋರ್ಟ್‌ನಲ್ಲಿ ಸ್ಟೇ ತಂದವರಿಗೆ, 80 ಪ್ರಕರಣಗಳಲ್ಲಿ ಭಾಗಿಯಾದವರಿಗೆ ಟಿಕೆಟ್ ನೀಡಿದ್ದಾರೆ ಎಂದು ಬಿಜೆಪಿ ಕಿಡಿಕಾರಿದರು. ಆರೋಪಿಸಿದರು.

ಮುಂದುವರಿದು, ಪಕ್ಷ ಬಿಟ್ಟಿದ್ದು ನಾನೊಬ್ಬನೇ ಅಲ್ಲ, ಹಲವು ಮುಖಂಡರು ಪಕ್ಷ ಬಿಟ್ಟಿದ್ದಾರೆ.  ಹೀಗಿದ್ದರೂ, ನನ್ನನ್ನೇ ಏಕೆ ಟಾರ್ಗೆಟ್ ಮಾಡಲಾಗುತ್ತಿದೆ. ಯಡಿಯೂರಪ್ಪ ಅವರಿಂದ ನನ್ನ ಬೈಯಿಸಲಾಗುತ್ತಿದೆ. ಅವರು ಮಾಡಿರುವ ಟೀಕೆಗಳನ್ನು ಆಶೀರ್ವಾದ ಎಂದು ಭಾವಿಸುತ್ತೇನೆ’ ಎಂದು ಹೇಳಿದರು.

ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರ ಸಣ್ಣ ಕ್ಷೇತ್ರ. ಈ ಕ್ಷೇತ್ರದಲ್ಲಿ ಬಿಜೆಪಿಯ ರಾಷ್ಟ್ರ ನಾಯಕರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸಚಿವೆ ಸ್ಮೃತಿ ಇರಾನಿ ಅವರನ್ನು ನನ್ನ ವಿರುದ್ಧ ಕರೆತಂದಿದ್ದಾರೆ. ಈ ಬಡಪಾಯಿ ಮೇಲೇಕೆ ಇಷ್ಟೊಂದು ಪ್ರಹಾರ. ನನ್ನ ಮೇಲೆ ಎಲ್ಲರೂ ಮುಗಿಬಿದ್ದಿದ್ದಾರೆ. ಇವರೆಲ್ಲರೂ ಸೇರಿ ಸಣ್ಣ ಸೆಂಟ್ರಲ್ ಕ್ಷೇತ್ರವನ್ನು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದಾರೆ. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ್ದು ದೊಡ್ಡ ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಕೂಡ ಕ್ಷೇತ್ರಕ್ಕೆ ಕರೆಸಲಾಗುತ್ತಿದೆ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೋದಿಗೆ ಕೇಂದ್ರದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಾಮರ್ಥ್ಯ ಇದೆ. ಅವರೆದುರು ನಾನು ಸಣ್ಣ ವ್ಯಕ್ತಿ. ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿರುವುದು ನಾನೊಬ್ಬನೇ ಅಲ್ಲ ಹಲವು ನಾಯಕರು ಕಾಂಗ್ರೆಸ್ ಸೇರಿಲ್ಲವೇ?. ಲಕ್ಷ್ಮಣ ಸವದಿ, ಯು.ಬಿ. ಬಣಕಾರ, ಆಯನೂರು ಮಂಜುನಾಥ ಅವರು ಬಿಜೆಪಿ ಬಿಟ್ಟು ಜೆಡಿಎಸ್ ಸೇರಿದ್ದಾರೆ. ಬಿ.ಎಸ್.ವೈ ಆಪ್ತ ಎನ್.ಆರ್. ಸಂತೋಷ ಕೂಡ ಪಕ್ಷ ಬಿಟ್ಟು, ಜೆಡಿಎಸ್ ಸೇರಿದ್ದಾರೆ’ ಎಂದು ಹೇಳಿದರು.

ಒರ್ವ ಲಿಂಗಾಯತ ನಾಯಕನಿಂದ ಮತ್ತೋರ್ವ ಲಿಂಗಾಯತ ನಾಯಕನನ್ನು ಬೈಯಿಸಲಾಗುತ್ತಿದೆ. ನೇರವಾಗಿ ಯುದ್ಧಕ್ಕೆ ಬರೋರು ಯಾರಿದ್ದರೂ ಬನ್ನಿ, ಯಡಿಯೂರಪ್ಪರನ್ನು ಯಾಕೆ ನಡುವೆ ತರುತ್ತಿದ್ದೀರಿ?. 50-60 ಜನ ಲಿಂಗಾಯತರ ಜೊತೆಗೆ ಸೇರಿ ಸಭೆ ಮಾಡಿದರೆ ಇಡೀ ಲಿಂಗಾಯತ ಸಮುದಾಯದ ಸಭೆ ಆಗಲ್ಲ. ನಾನು ಬಿಜೆಪಿಗೆ ದ್ರೋಹ ಮಾಡಿದ್ದೆ ಎಂದು ಹೇಳುತ್ತಾರೆ. ಈ ಬಗ್ಗೆ ಮಾತನಾಡಲು ಯಾರಿಗೂ ನೈತಿಕತೆ ಇಲ್ಲ. ಜಗದೀಶ್ ಶೆಟ್ಟರ್ ಎಂದೂ ಪಕ್ಷಕ್ಕೆ ದ್ರೋಹ ಬಗೆದಿಲ್ಲ. ನಾನು ಎಂದೂ ಬಿಜೆಪಿಗೆ ಮೋಸ ಮಾಡಿಲ್ಲ ಎಂದರು.

ಮುಖಂಡರು ಬೇರೆ ಬೇರೆ ಪಕ್ಷಕ್ಕೆ ಹೋಗುವುದು ಸಹಜ. ಆದರೆ, ಶೆಟ್ಟರ್ ಅವರು ಹೋಗಿದ್ದನ್ನೇ ದೊಡ್ಡ ಅಪರಾಧ ಎನ್ನುವಂತೆ ಬಿಂಬಿಸಲಾಗುತ್ತಿದೆ. ಒಂದು ರೀತಿ ಆಂದೋಲನದಂತೆ ನನ್ನ ವಿರುದ್ಧ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ನಾಯಕರು ಪ್ರಚಾರ ಕೈಗೊಂಡಿದ್ದಾರೆ. ನಾನು ಪಕ್ಷಕ್ಕೆ ಏನು ಅನ್ಯಾಯಮಾಡಿದ್ದೇನೆ? ಏನು ದ್ರೋಹ ಮಾಡಿದ್ದೇನೆ? ಮತ್ತೊಂದು ಅವಧಿಗೆ ಸ್ಪರ್ಧಿಸಲು ಟಿಕೆಟ್ ಕೊಡಿ ಎಂದು ಕೇಳಿದ್ದೆ ತಪ್ಪಾ? ಎಂದು ಪ್ರಶ್ನಿಸಿದರು.

No Comments

Leave A Comment