Log In
BREAKING NEWS >
Nandini Milk: ಕೆಎಂಎಫ್ ನಂದಿನಿ ಮಿಲ್ಕ್ ಹೊಸ ದಾಖಲೆ​​: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ....

ಅಮೃತಪಾಲ್ ಸಿಂಗ್ ಬಂಧನಕ್ಕೆ ಮುಂದುವರಿದ ಶೋಧ ಕಾರ್ಯಾಚರಣೆ, ಭದ್ರತೆ ಬಿಗಿಗೊಳಿಸಿದ ಪೊಲೀಸರು

ಚಂಡೀಗಢ: ತೀವ್ರಗಾಮಿ ಬೋಧಕ ಮತ್ತು ಖಲಿಸ್ತಾನದ ಪರ ಸಹಾನುಭೂತಿ ಹೊಂದಿರುವ ಅಮೃತಪಾಲ್ ಸಿಂಗ್‌ ಬಂಧನಕ್ಕೆ ಇನ್ನೂ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮೃತ್‌ಪಾಲ್ ಸಿಂಗ್ ಪರಾರಿಯಾಗಿದ್ದು, ನಾವು ಅವನನ್ನು ಹುಡುಕುತ್ತಿದ್ದೇವೆ ಮತ್ತು ನಾವು ಶೀಘ್ರದಲ್ಲೇ ಅವನನ್ನು ಬಂಧಿಸುತ್ತೇವೆ ಎಂದು ಜಲಂಧರ್ ಪೊಲೀಸ್ ಕಮಿಷನರ್ ಕುಲದೀಪ್ ಸಿಂಗ್ ಚಾಹಲ್ ಶನಿವಾರ ತಡರಾತ್ರಿ ಜಲಂಧರ್‌ನ ನಾಕೋದರ್ ಬಳಿ ಸುದ್ದಿಗಾರರಿಗೆ ತಿಳಿಸಿದರು.

ಅಮೃತಪಾಲ್ ಸಿಂಗ್ ಅವರ ಆರರಿಂದ ಏಳು ಬಂದೂಕುಧಾರಿಗಳನ್ನು ಬಂಧಿಸಲಾಗಿದೆ ಎಂದು ಚಾಹಲ್ ಹೇಳಿದರು.
ಪಂಜಾಬ್ ಸರ್ಕಾರವು ಶನಿವಾರ ಅಮೃತಪಾಲ್ ವಿರುದ್ಧ ದೊಡ್ಡ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಪೊಲೀಸರು ಅಮೃತಪಾಲ್ ನೇತೃತ್ವದ ಸಂಘಟನೆಯ 78 ಸದಸ್ಯರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಲಂಧರ್ ಜಿಲ್ಲೆಯ ಮೆಹತ್‌ಪುರ ಗ್ರಾಮದಲ್ಲಿ ಅಮೃತ್ ಪಾಲ್‌ ಹಾಗೂ ಅವರ ಬೆಂಬಲಿಗರು ಇರುವ ವಾಹನವನ್ನು ಪೊಲೀಸರು ಬೆನ್ನತ್ತಿದ್ದರು. ಪೊಲೀಸರ ಕೈಗೆ ಇನ್ನೇನು ಸಿಕ್ಕೇಬಿಟ್ಟರು ಎನ್ನುವಷ್ಟರಲ್ಲಿ ತಪ್ಪಿಸಿಕೊಂಡರು ಎಂದಿದ್ದಾರೆ.

ಕಾರ್ಯಾಚರಣೆ ನಡೆಯುತ್ತಿರುವುದರಿಂದ, ಅಧಿಕಾರಿಗಳು ಹಲವಾರು ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ ಮತ್ತು ಭಾನುವಾರ ಮಧ್ಯಾಹ್ನದವರೆಗೆ ರಾಜ್ಯದಲ್ಲಿ ಇಂಟರ್ನೆಟ್ ಮತ್ತು ಎಸ್ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಸಿಂಗ್ ನೇತೃತ್ವದ ‘ವಾರಿಸ್ ಪಂಜಾಬ್ ದೇ’ ಗುಂಪಿನ ಸದಸ್ಯರ ವಿರುದ್ಧ ಪೊಲೀಸರು ಶನಿವಾರ ರಾಜ್ಯದಲ್ಲಿ ಬೃಹತ್ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದು, ಅವರ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇದುವರೆಗೆ 78 ಮಂದಿಯನ್ನು ಬಂಧಿಸಲಾಗಿದ್ದು, ಇನ್ನೂ ಹಲವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಅಮೃತಪಾಲ್ ಸಿಂಗ್ ಅವರ ‘ಖಾಲ್ಸಾ ವಾಹಿರ್’- ಧಾರ್ಮಿಕ ಮೆರವಣಿಗೆ ಮುಕ್ತಸರ್ ಜಿಲ್ಲೆಯಿಂದ ಪ್ರಾರಂಭವಾಗುವ ಒಂದು ದಿನ ಮುಂಚಿತವಾಗಿ ಪೋಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.

ರಾಜ್ಯಾದ್ಯಂತ ನಡೆಸಿದ ಕಾರ್ಯಾಚರಣೆಯಲ್ಲಿ ಪೊಲೀಸರು, 315 ಬೋರ್ ರೈಫಲ್, ಏಳು 12 ಬೋರ್ ರೈಫಲ್‌ಗಳು, ಒಂದು ರಿವಾಲ್ವರ್ ಮತ್ತು ವಿವಿಧ ಕ್ಯಾಲಿಬರ್‌ನ 373 ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪಂಜಾಬ್‌ನ ಹಲವೆಡೆ ತೀವ್ರ ವಾಹನ ತಪಾಸಣೆಯೊಂದಿಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

No Comments

Leave A Comment