ಉಡುಪಿ: ಕಮಲಾಕ್ಷಿ ಸಹಕಾರಿ ಸಂಘದ ಅಧ್ಯಕ್ಷ ಅರೆಸ್ಟ್-ಜ. 11ರವರೆಗೆ ನ್ಯಾಯಾಂಗ ಬಂಧನ-ವೈಯಕ್ತಿಕ ಆಸ್ತಿಗಳನ್ನು ಮಾರಿಯಾದರೂ ಹಣ ನೀಡುವೆ -ಆರೋಪಿಪರ ವಕೀಲರು
ಉಡುಪಿ: ಡಿ 29. ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸೊಸೈಟಿಯಿಂದ 100 ಕೋಟಿಗೂ ಮಿಕ್ಕಿ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲಾಕ್ಷಿ ಸಹಕಾರಿ ಸಂಘದ ಅಧ್ಯಕ್ಷ ಬಿ.ವಿ.ಲಕ್ಷ್ಮೀನಾರಾಯಣ ಅವರನ್ನು ಉಡುಪಿ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಬ್ರಹ್ಮಾವರ ಸಮೀಪದ ಮಟಪಾಡಿಯಲ್ಲಿ ಲಕ್ಷ್ಮೀನಾರಾಯಣರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದ ಗ್ರಾಹಕರು ಡಿ.19ರಂದು ಸೊಸೈಟಿಯ ಕಚೇರಿಗೆ ಘೇರಾವ್ ಹಾಕಿದ್ದು, ಗ್ರಾಹಕರಿಗೆ 100 ಕೋಟಿ ರೂ.ಗೂ ಹೆಚ್ಚು ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಹಕಾರಿ ಸಂಘವು ಗ್ರಾಹಕರಿಂದ 100 ಕೋಟಿಗೂ ಹೆಚ್ಚು ಠೇವಣಿ ಸಂಗ್ರಹಿಸಿ ವಿವಿಧೆಡೆ ಹೂಡಿಕೆ ಮಾಡಿದೆ ಎನ್ನಲಾಗಿದೆ.
ಜ. 11ರವರೆಗೆ ನ್ಯಾಯಾಂಗ ಬಂಧನ:
ಇನ್ನು ಬಂಧಿಸಲ್ಪಟ್ಟಿರುವ ಲಕ್ಷ್ಮೀನಾರಾಯಣನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ಉಡುಪಿ ಜೆಎಂಎಫ್ ಸಿ ಕೋರ್ಟ್ ಜನವರಿ 11ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಜನವರಿ 2ರಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಕೊರೋನಾದ ಆರ್ಥಿಕ ಮುಗ್ಗಟ್ಟಿನಿಂದ ಸಮಸ್ಯೆಯಾಗಿದೆ. ಸೊಸೈಟಿಗೆ ಗ್ರಾಹಕರಿಂದ ಬರಬೇಕಾದ ಸಾಲದ ಹಣದ ಮೊತ್ತ ದೊಡ್ಡದಿದೆ. ಆ ಹಣ ವಸೂಲಿಯಾಗದ ಕಾರಣ ಈ ಸಮಸ್ಯೆಯಾಗಿದೆ. ಗ್ರಾಹಕರು ಯಾರು ಹೆದರಬೇಕಾದ ಅಗತ್ಯ ಇಲ್ಲ. ವೈಯಕ್ತಿಕ ಆಸ್ತಿಗಳನ್ನು ಮಾರಿಯಾದರೂ ಹಣ ನೀಡುತ್ತೇನೆ ಎಂದು ಲಕ್ಷ್ಮಿನಾರಾಯಣ ಹೇಳಿದ್ದಾರೆ. ಕ್ರಿಪ್ಟೋ ಕರೆನ್ಸಿ ಬಿಟ್ ಕಾಯಿನ್ ಇತರ ಯಾವುದರಲ್ಲೂ ಅವರು ಹೂಡಿಕೆ ಮಾಡಿಲ್ಲ ಎಂದು ಆರೋಪಿ ಪರ ವಕೀಲರಾದ ಮಿತ್ರಕುಮಾರ್ ಶೆಟ್ಟಿ ಹೇಳಿದ್ದಾರೆ.