Log In
BREAKING NEWS >
...........ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ,ಅಭಿಮಾನಿಗಳಿಗೆ "ಶ್ರೀರಾಮನವಮಿ"ಯ ಶುಭಾಶಯಗಳು.......

ತಮಿಳುನಾಡು: ದೇವಸ್ಥಾನದ ಉತ್ಸವದ ವೇಳೆ ಕ್ರೇನ್ ಕುಸಿದು ಬಿದ್ದು ನಾಲ್ವರು ಸಾವು, ಹಲವರಿಗೆ ಗಾಯ

ಚೆನ್ನೈ: ತಮಿಳುನಾಡಿನ ರಾಣಿಪೇಟ್ ಜಿಲ್ಲೆಯ ಕಿಲ್ವೀಡಿ ಗ್ರಾಮದಲ್ಲಿ ದೇವಸ್ಥಾನದ ಉತ್ಸವದ ವೇಳೆ ಕ್ರೇನ್ ಕುಸಿದು ನಾಲ್ವರು ಸಾವಿಗೀಡಾಗಿದ್ದಾರೆ ಮತ್ತು ಹಲವರು ಗಾಯಗೊಂಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಮೃತರನ್ನು ಮುತ್ತುಕುಮಾರ್ (31), ಜ್ಯೋತಿಬಾಬು (19) ಮತ್ತು ಎಸ್.ಭೂಪಾಲನ್ (41) ಎಂದು ಗುರುತಿಸಲಾಗಿದೆ.

ಕಿಲ್ವೀಡಿ ಗ್ರಾಮದಲ್ಲಿ ನಡೆದ ದ್ರೌಪತಿ ಅಮ್ಮನವರ ಉತ್ಸವದ ಸಂದರ್ಭದಲ್ಲಿ ಪಟ್ಟಣದಾದ್ಯಂತ ಮೆರವಣಿಗೆಯಲ್ಲಿ ದೇವರ ವಿಗ್ರಹವನ್ನು ಹೊತ್ತ ಕ್ರೇನ್‌ನಲ್ಲಿ ಎಂಟು ಜನರು ಇದ್ದರು. ಮೆರವಣಿಗೆ ವೇಳೆ ಕ್ರೇನ್ ಕುಸಿದು ಬಿದ್ದಿದ್ದು, ಮೇಲಿದ್ದ ಎಂಟು ಮಂದಿ ನೆಲಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದಾಗ ಸುಮಾರು 1,500 ಜನರು ರಸ್ತೆ ಮತ್ತು ದೇವಸ್ಥಾನದ ಆವರಣದಲ್ಲಿ ಇದ್ದರು.

ಕ್ರೇನ್ ಕುಸಿದು ಬಿದ್ದ ನಂತರ ಗಾಯಾಳುಗಳನ್ನು ಅರ್ಕೋಣಂ ಸರ್ಕಾರಿ ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ. ಅವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇನ್ನೂ ನಾಲ್ವರಿಗೆ ಆಗಿರುವ ಗಾಯಗಳು ಗಂಭೀರವಾಗಿದ್ದು, ಗಾಯಾಳುಗಳ ಮೇಲೆ ವೈದ್ಯರು ತೀವ್ರ ನಿಗಾ ವಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ತನಿಖೆಯನ್ನು ಪ್ರಾರಂಭಿಸಲಾಗಿದೆ ಮತ್ತು ಅಪಘಾತದ ಕಾರಣದ ಕುರಿತು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ನೆಮಿಲಿ ಪೊಲೀಸರು ಸುದ್ದಿಸಂಸ್ಥೆ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

No Comments

Leave A Comment