ಭಾರತ ಕ್ರಿಕೆಟ್ ತಂಡ ಪಾಕ್ ಪ್ರವಾಸ ಕೈಗೊಳ್ಳುವ ಬಗ್ಗೆ ಗೃಹ ಸಚಿವಾಲಯ ನಿರ್ಧರಿಸಲಿದೆ: ಕ್ರೀಡಾ ಸಚಿವ
ನವದೆಹಲಿ: ಆಟಗಾರರ ಭದ್ರತೆ ಪ್ರಮುಖ ವಿಷಯವಾಗಿರುವುದರಿಂದ ಮುಂದಿನ ವರ್ಷ ಏಷ್ಯಾಕಪ್ಗಾಗಿ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ತೆರಳುವ ಬಗ್ಗೆ ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಗುರುವಾರ ಹೇಳಿದ್ದಾರೆ.
ಮುಂದಿನ ವರ್ಷ ಏಕದಿನ ವಿಶ್ವಕಪ್ನಲ್ಲಿ ಸ್ಪರ್ಧಿಸಲು ಪಾಕಿಸ್ತಾನ ತಂಡವು ಭಾರತಕ್ಕೆ ಬರುವ ನಿರೀಕ್ಷೆ ಇದೆ, “ಎಲ್ಲರಿಗೂ ಸ್ವಾಗತ” ಎಂದು ಠಾಕೂರ್ ತಿಳಿಸಿದರು.
2023ರ ಏಷ್ಯಾಕಪ್ಗಾಗಿ ಭಾರತ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಮಂಗಳವಾರ ಹೇಳಿದ್ದರು.
ಜಯ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ), ಇದು ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ನಲ್ಲಿ ತಮ್ಮ ತಂಡದ ಭಾಗವಹಿಸುವಿಕೆಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ.
“ವಿಶ್ವಕಪ್ಗೆ ಅರ್ಹತೆ ಪಡೆದ ಎಲ್ಲಾ ತಂಡಗಳನ್ನು(ಭಾರತದ ನೆಲದಲ್ಲಿ ಸ್ಪರ್ಧಿಸಲು) ಆಹ್ವಾನಿಸಲಾಗಿದೆ. ಪಾಕಿಸ್ತಾನ ತಂಡಗಳು ಅನೇಕ ಬಾರಿ ಭಾರತಕ್ಕೆ ಬಂದು ಆಡಿವೆ. ಭಾರತವು (ಯಾರೊಬ್ಬರಿಂದ) ನಿರ್ದೇಶಿಸಲ್ಪಡುವ ಸ್ಥಿತಿಯಲ್ಲಿಲ್ಲ ಎಂದು ನಾನು ಭಾವಿಸುತ್ತೇನೆ. ಪಾಕಿಸ್ತಾನ ಸೇರಿದಂತೆ ಎಲ್ಲಾ ದೇಶಗಳು ಬಂದು ಸ್ಪರ್ಧಿಸುತ್ತವೆ ಎಂಬ ನಿರೀಕ್ಷೆ ಇದೆ” ಎಂದು ಶಾ ಮತ್ತು ಪಿಸಿಬಿ ಹೇಳಿಕೆಯ ನಂತರ ಕೇಂದ್ರ ಕ್ರೀಡಾ ಸಚಿವ ಠಾಕೂರ್ ತಿಳಿಸಿದ್ದಾರೆ.