‘ಕಿತ್ತೂರು ಕರ್ನಾಟಕ ಬಿಜೆಪಿಯ ಭದ್ರಕೋಟೆ, ಬೆಳಗಾವಿಯ ಬಿಜೆಪಿ ನಾಯಕರಲ್ಲಿ ಭಿನ್ನಮತವಿಲ್ಲ’: ಸಿಎಂ ಬೊಮ್ಮಾಯಿ
ಹುಬ್ಬಳ್ಳಿ: ಕೇಂದ್ರ ಸಚಿವ ಅಮಿತ್ ಶಾ ಅವರು ಬಂದು ಇಂದು ಹುಬ್ಬಳ್ಳಿ, ಧಾರವಾಡದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಕಿತ್ತೂರು ಕರ್ನಾಟಕ ಭಾಗದಲ್ಲಿ ಸಂಚಲನ ಉಂಟುಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಬೆಳಗ್ಗೆ ತಮ್ಮ 63ನೇ ಹುಟ್ಟುಹಬ್ಬದ ಪ್ರಯುಕ್ತ ಹುಬ್ಬಳ್ಳಿಯಲ್ಲಿರುವ ತಂದೆ-ತಾಯಿ ಸಮಾಧಿಗೆ ಭೇಟಿ ನೀಡಿ ಆಶೀರ್ವಾದ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿದರು.
ಕಿತ್ತೂರು ಕರ್ನಾಟಕ ಬಿಜೆಪಿಯ ಭದ್ರಕೋಟೆ. ಸಮಗ್ರ ಕರ್ನಾಟಕ ದೃಷ್ಟಿಯಲ್ಲಿಟ್ಟುಕೊಂಡು ಅಮಿತ್ ಶಾ ಅವರು ರಾಜ್ಯದಲ್ಲಿ ಪ್ರವಾಸ ಮಾಡುತ್ತಾರೆ. ಈ ಬಾರಿ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಕಳೆದ ತಿಂಗಳು ಮಂಡ್ಯಕ್ಕೆ ಬಂದಿದ್ದ ಅವರು ಈಗ ಉತ್ತರ ಕರ್ನಾಟಕ ಭಾಗಕ್ಕೆ ಮುಂದಿನ ತಿಂಗಳು ಹೈದರಾಬಾದ್ ಕರ್ನಾಟಕ ಭಾಗಕ್ಕೆ ಬರಲಿದ್ದಾರೆ ಎಂದರು.
ಬಿಜೆಪಿ ಪಕ್ಷ, ಪಕ್ಷದ ಸಂಘಟನೆ ನಿರಂತರವಾಗಿ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳಿಂದ ಅಬಿವೃದ್ಧಿಯಾಗಿದ್ದು, ಹಲವು ಯೋಜನೆಗಳ ಉದ್ಘಾಟನೆ ಶಿಲಾನ್ಯಾಸ ಆಗುತ್ತಿದೆ. ಕೇಂದ್ರ ನಾಯಕರು ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ನಾವು ಅದನ್ನು ಸದುಪಯೋಗಪಡಿಸಿಕೊಂಡು ರಾಷ್ಟ್ರೀಯ ನಾಯಕರ ಪ್ರಭಾವವನ್ನು ಕರ್ನಾಟಕ ರಾಜಕಾರಣಕ್ಕೆ ಪಕ್ಷ ಬಳಕೆ ಮಾಡಿಕೊಳ್ಳುತ್ತದೆ ಎಂದರು.
ಬೆಳಗಾವಿ ಬಿಜೆಪಿ ನಾಯಕರಲ್ಲಿ ಭಿನ್ನಮತವಿಲ್ಲ, ಎಲ್ಲಿಯೂ ಅವರು ಅಬಿವ್ಯಕ್ತ ಮಾಡಿಲ್ಲ, ನಮ್ಮ ದೃಷ್ಟಿಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಇದ್ದಾರೆ. ಪಕ್ಷದ ಬೆಳವಣಿಗೆ ಮುಖ್ಯ, ಎಲ್ಲರೂ ಶ್ರಮಿಸಬೇಕಾಗಿದ್ದು, ಕರ್ನಾಟಕದ ಪ್ರತಿಯೊಂದು ಭಾಗಗಳಲ್ಲಿಯೂ ಬಿಜೆಪಿ ಪಕ್ಷಕ್ಕೆ ಒಂದು ಗುರಿಯಿದ್ದು ಅದರ ಸಾಧನೆಗೆ ನಾವು ಸಂಘಟನೆ ಕೆಲಸ ಮಾಡುತ್ತೇನೆ ಎಂದರು.
ಡಿ ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಸಿಂಹಸ್ವಪ್ನವಾಗಿದೆ, ಕನಸಿನಲ್ಲಿಯೂ ಅವರಿಗೆ ಬಿಜೆಪಿ ಬರುತ್ತದೆ, ಹೀಗಾಗಿ ಬಿಜೆಪಿ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುತ್ತಾರೆ ಎಂದರು.
ತಮ್ಮ ಹುಟ್ಟುಹಬ್ಬಕ್ಕೆ ಇಂದು ಏನು ವಿಶೇಷವಿದೆ ಎಂದು ಕೇಳಿದಾಗ, ವಿಶೇಷವಾಗಿ ಏನೂ ಇಲ್ಲ, ಜನರು,ಅಭಿಮಾನಿಗಳು ಬಂದು ಶುಭ ಹಾರೈಸುತ್ತಾರೆ, ಪ್ರತಿನಿತ್ಯದಂತೆ ಕೆಲಸ ಮಾಡುತ್ತೇವೆ ಎಂದರು.