‘ಹಗಲುಗನಸು ಬೇಡ… ಬೇಕಿದ್ದರೆ ರಾಜಕೀಯ ಬಿಡುತ್ತೇನೆ.. ಮಂಡ್ಯವನ್ನಲ್ಲ’: ಸಂಸದೆ ಸುಮಲತಾ ಅಂಬರೀಷ್
ಮಂಡ್ಯ: ನಾನು ಮಂಡ್ಯ ಬಿಟ್ಟು ಹೋಗುತ್ತೇನೆ ಎಂದು ಕೆಲವರು ಹಗಲುಗನಸು ಕಾಣುತ್ತಿದ್ದಾರೆ. ಆದರೆ ರಾಜಕೀಯ ಬಿಡುತ್ತೇನೆಯೇ ಹೊರತು ಮಂಡ್ಯವನ್ನಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.
ಮದ್ದೂರಿನಲ್ಲಿ ಮಾತನಾಡಿದ ಅವರು, ರಾಜಕೀಯ ಬಿಟ್ಟರೂ ನಾನು ಮಂಡ್ಯ ಬಿಡಲ್ಲ… ಹೊಸ ಕ್ಷೇತ್ರ ಹುಡುಕ್ತಿರೋದು ಯಾರಾ ಕನಸು ಅಂತಾ ಗೊತ್ತಿಲ್ಲ. ಒಂದಷ್ಟು ಜನರು ಕನಸು ಕಾಣ್ತಿದ್ದಾರೆ. ಅವರ ಕನಸಿಗೆ ನೀರು ಚೆಲ್ಲಿದ ಹಾಗೇನೆ. ನಾನು ರಾಜಕೀಯಕ್ಕೆ ಬಂದಿರೋದೆ ಮಂಡ್ಯಕ್ಕೋಸ್ಕರ. ರಾಜಕೀಯದಿಂದ ಏನೇನೋ ಆಗ್ಲಿಕ್ಕೆ ಬಂದಿಲ್ಲ. ರಾಜಕೀಯ ಬೇಕಿದ್ರೆ ಇಂದು ಇರ್ತೀನಿ, ನಾಳೆ ಬಿಡ್ತೀನಿ.. ಆದ್ರೆ ಮಂಡ್ಯ ಬಿಡಲ್ಲ ಎಂದಿದ್ದಾರೆ.
ನಾನು ಏನಾದರೂ ಚುನಾವಣೆಯಲ್ಲಿ ನಿಲ್ಲುತ್ತಿದೇನಾ..? ನಾನು ಯಾರಿಗೆ ಬೆಂಬಲ ಕೊಡಬೇಕು ಅನ್ನೋದನ್ನ ಮುಂದೆ ನೋಡೋಣ. ಇನ್ನು ಯಾರು ಕ್ಯಾಂಡಿಡೇಟ್ಸ್ ಅನ್ನೋದು ಗೊತ್ತಾಗಿಲ್ಲವಲ್ಲ. ಈಗಲೇ ನಾನು ಯಾರಿಗೆ ಅಂತ ಬೆಂಬಲ ಸೂಚಿಸಲಿ. ನನ್ನ ಪರವಾಗಿ ನಿಂತು ಎಲ್ಲರೂ ಹೋರಾಟ ಮಾಡಿದ್ದಾರೆ. ಯಾರಿಗೂ ಕೂಡ ನೋಯಿಸಬಾರದು ಅಲ್ವಾ. ಅಭಿ ಸದ್ಯಕ್ಕೆ ಎರಡ್ಮೂರು ಸಿನಿಮಾ ಮಾಡ್ತಿದ್ದಾನೆ. ಅವನ ರಾಜಕೀಯ ಭವಿಷ್ಯವನ್ನ ಅವನೆ ಡಿಸೈಡ್ ಮಾಡಬೇಕು ಎಂದಿದ್ದಾರೆ.
ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ಕ್ಷೇತ್ರ ಬದಲಾವಣೆ ಮಾಡುತ್ತಾರೆ ಎನ್ನುವ ಚರ್ಚೆಗೆ ಈಗ ತೆರೆ ಬಿದ್ದಿದೆ ಎಂದು ತಮ್ಮ ರಾಜಕೀಯ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸದೆ ಸುಮಲತಾ ಅಂಬರೀಶ್, ನಾನು ರಾಜಕೀಯಕ್ಕೆ ಬಂದಿರುವುದೇ ಮಂಡ್ಯದ ಜನರಿಗಾಗಿ. ಹಾಗಾಗಿ ರಾಜಕೀಯ ಬೇಕಾದರೆ ಬಿಡುತ್ತೇನೆ.. ಆದರೆ ಮಂಡ್ಯ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಹೊಸ ಕ್ಷೇತ್ರ ಹುಡುಕುತ್ತಿರುವುದು ಯಾರ ಕನಸು ಅನ್ನುವುದು ಗೊತ್ತಿಲ್ಲ. ಆದರೆ ಹಾಗೇನಾದರೂ ಮಾಡುತ್ತಿದ್ದರೆ, ಅವರ ಕನಸಿಗೆ ನೀರು ಚೆಲ್ಲಿದ ಹಾಗೇನೆ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಯಾರಿಗೂ ಬೆಂಬಲವಿಲ್ಲ, ತಟಸ್ಛ ನಿಲುವು
ಇನ್ನು ಚುನಾವಣೆಗೂ ಮುನ್ನವೆ ತಟಸ್ಥ ನೀತಿಯನ್ನು ಸುಮಲತಾ ಅನುಸರಿಸಿದ್ದು, ಯಾರಿಗೂ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಇನ್ನೂ ಕೂಡ ಅಭ್ಯರ್ಥಿಗಳು ಯಾರು ಅಂತ ಗೊತ್ತಿಲ್ಲ. ಹೀಗಾಗಿ ಯಾರಿಗೆ ಅಂತ ಬೆಂಬಲ ಕೊಡಲಿ. ಅಲ್ಲದೆ, ಎಲ್ಲರೂ ನನ್ನ ಪರ ಇದ್ದಾರೆ. ಚುನಾವಣೆಯಲ್ಲಿ ನನಗೆ ಬೆಂಬಲವನ್ನೂ ಕೂಡ ಕೊಟ್ಟಿದ್ದಾರೆ. ಹಾಗಾಗಿ ಯಾರಿಗೂ ಬೆಂಬಲ ಕೊಡದೆ ತಟಸ್ಥವಾಗಿರುವುದಾಗಿ ಸುಮಲತಾ ಹೇಳಿದ್ದಾರೆ. ಕಳೆದ ಬಾರಿಯೂ ಸುಮಲತಾ ತಟಸ್ಥ ನೀತಿಯನ್ನೇ ಅನುಸರಿಸಿದ್ದರು.