ತುಮಕೂರು: ಕಾಂಪೌಂಡ್ಗೆ ಮಾರುತಿ ವ್ಯಾನ್ ಡಿಕ್ಕಿ: ಇಬ್ಬರ ಸಾವು
ತುಮಕೂರು: ಬೆಸ್ಕಾಂ ಕಚೇರಿಯ ಸೆಕ್ಯೂರಿಟಿ ಕಾಂಪೌಂಡ್ಗೆ ಮಾರುತಿ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನ ಹೊರಪೇಟೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ ಮತ್ತೋರ್ವ ಗಾಯಗೊಂಡಿದ್ದಾರೆ.
ತುಮಕೂರು ನಗರದ ನಿವಾಸಿ ದೀಪು (36 ವರ್ಷ) ಹಾಗೂ ಮಾರುತಿ ವ್ಯಾನ್ ಚಾಲಕ ಮುನೀರ್ ಖಾನ್ (25 ವರ್ಷ) ಎಂಬುವವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ವಾಹನದಲ್ಲಿದ್ದ ಮತ್ತೋರ್ವ ಮಂಜುನಾಥ್ (22 ವರ್ಷ) ಎಂಬಾತ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯರಾತ್ರಿ ಸುಮಾರು 12.15 ಗಂಟೆ ಸಮಯದಲ್ಲಿ ಈ ಮೂವರು ಮಾರುತಿ ವ್ಯಾನ್ನಲ್ಲಿ ಮಂಡಿಪೇಟೆ ಕಡೆಯಿಂದ ಹೊರಪೇಟೆಯತ್ತ ತೆರಳುತ್ತಿದ್ದರು. ಹೊರಪೇಟೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬೆಸ್ಕಾಂ ಕಚೇರಿಯ ಸೆಕ್ಯೂರಿಟಿ ಕಾಂಪೌಂಡ್ಗೆ ಮಾರುತಿ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಅಪ್ಪಳಿಸಿದ್ದರಿಂದ ದೀಪು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಚಾಲಕ ಮುನೀರ್ ಖಾನ್ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕೊಂಡೊಯ್ಯುವ ಮಾರ್ಗಮಧ್ಯೆ ಅಸುನೀಗಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.