Log In
BREAKING NEWS >
...........ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ,ಅಭಿಮಾನಿಗಳಿಗೆ "ಶ್ರೀರಾಮನವಮಿ"ಯ ಶುಭಾಶಯಗಳು.......

ಮೋದಿ ಸಾಕ್ಷ್ಯಚಿತ್ರ ವಿವಾದ ಬೆನ್ನಲ್ಲೇ ಬಿಬಿಸಿಯ ದೆಹಲಿ, ಮುಂಬೈ ಕಚೇರಿಗಳಿಗೆ ಐಟಿ ಶಾಕ್!

ನವದೆಹಲಿ: ಮೋದಿ ಸಾಕ್ಷ್ಯಾಚಿತ್ರ ವಿವಾದದ ಬೆನ್ನಲ್ಲೇ ದೆಹಲಿ ಹಾಗೂ ಮುಂಬೇನಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತೆರಿಗೆ ಸಮೀಕ್ಷೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಕಸ್ತೂರ್ ಬಾ ಗಾಂಧಿ ಮಾರ್ಗ್‌ನಲ್ಲಿರುವ ಬಿಬಿಸಿ ಕಚೇರಿ ಹಾಗೂ ಮುಂಬೈನಲ್ಲಿರುವ ಬಿಬಿಸಿ ಕಚೇರಿಯಲ್ಲಿ ತೆರಿಗೆ ಸಮೀಕ್ಷೆ ನಡೆಸುತ್ತಿದ್ದಾರೆಂದು ಎಂದು ವರದಿಗಳು ತಿಳಿಸಿವೆ.

ಆದಾಯ ತೆರಿಗೆ ಇಲಾಖೆಯ ಸರ್ವೇಯೂ ಕಂಪನಿಯ ವ್ಯವಹಾರ ಆವರಣದಲ್ಲಿ ಮಾತ್ರ ನಡೆಯುತ್ತದೆ. ಅದರ ಸಿಇಒ ಅಥವಾ ನಿರ್ದೇಶಕರ ನಿವಾಸಗಳು ಮತ್ತು ಇತರ ಸ್ಥಳಗಳ ಮೇಲೆ ದಾಳಿ ಮಾಡುವುದಿಲ್ಲ. ಲಂಡನ್ ಪ್ರಧಾನ ಕಚೇರಿಯ ಸಾರ್ವಜನಿಕ ಪ್ರಸಾರಕ ಮತ್ತು ಅದರ ಭಾರತೀಯ ಅಂಗದ ವ್ಯವಹಾರ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಇಲಾಖೆ ಪರಿಶೀಲಿಸುತ್ತಿದೆ. ತನಿಖೆಯು BBC ಅಂಗಸಂಸ್ಥೆ ಕಂಪನಿಗಳ ಅಂತಾರಾಷ್ಟ್ರೀಯ ತೆರಿಗೆ ಸಮಸ್ಯೆಗಳಿಗೆ ಸಂಬಂಧಿಸಿದೆ ಎಂದು ಮೂಲಗಳು ಸೂಚಿಸಿವೆ.

ಐಟಿ ಇಲಾಖೆಯ 60-70 ಸದಸ್ಯರ ತಂಡವು ಬಿಬಿಸಿ ಕಚೇರಿಗೆ ಭೇಟಿ ನೀಡಿದ್ದು, BBC ಯ ದೆಹಲಿ ಕಚೇರಿಯಲ್ಲಿ ಮಧ್ಯಾಹ್ನದ ಪಾಳಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಲಾಯಿತು ಮತ್ತು ಕಚೇರಿಯಲ್ಲಿ ಹಾಜರಿದ್ದವರಿಗೆ ಬೇಗ ಹೊರಡುವಂತೆ ತಿಳಿಸಲಾಯಿತು ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.

2002ರ ಗುಜರಾತ್ ಗಲಭೆ ವಿಚಾರವಾಗಿ ಬ್ರಿಟನ್ ಮೂಲದ ಸುದ್ದಿಸಂಸ್ಥೆ ಬಿಬಿಸಿ “ಇಂಡಿಯಾ: ದಿ ಮೋದಿ ಕ್ವಷ್ಚನ್” ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರ ತಯಾರಿಸಿದೆ. ಗುಜರಾತ್ ಗಲಭೆಯಲ್ಲಿ ಅಂದಿನ ಸಿಎಂ ಆಗಿದ್ದ ನರೇಂದ್ರ ಮೋದಿ ಅವರು ಕೈಗೊಂಡ ನಿರ್ಧಾರಗಳನ್ನು ಸಾಕ್ಷ್ಯಚಿತ್ರದಲ್ಲಿ ಟೀಕಿಸಲಾಗಿದ್ದು, ಡಾಕ್ಯುಮೆಂಟರಿಯನ್ನ 2 ಭಾಗಗಳಲ್ಲಿ ನಿರ್ಮಾಣ ಮಾಡಲಾಗಿದೆ. ಅಂದರೆ ಸಿರೀಸ್ ರೀತಿ ಬಿಡುಗಡೆ ಮಾಡಲಾಗಿದೆ.

ಈ ಡಾಕ್ಯುಮೆಂಟರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದ ಮುಸ್ಲಿಂ ಅಲ್ಪಸಂಖ್ಯಾತರ ಕುರಿತು ಇರುವ ಧೋರಣೆಯನ್ನ ಬಿಂಬಿಸಲಾಗಿದೆಯಂತೆ. 2002ರಲ್ಲಿ ಗುಜರಾತ್ನಲ್ಲಿ ಸಂಭವಿಸಿದ ಗೋಧ್ರೋತ್ತರ ಗಲಭೆ ಕುರಿತ ಮಾಹಿತಿ ಇದೆಯಂತೆ. ಎಲ್ಲಕ್ಕಿಂತಾ ಹೆಚ್ಚಾಗಿ ಈ ಗಲಭೆಯಲ್ಲಿ ಮೋದಿ ಅವರ ಪಾತ್ರದ ಉಲ್ಲೇಖ ಇದ್ಯಂತೆ. ಈ ಗಲಭೆ ನಡೆದಾಗ ಮೋದಿ ಅವರು ಗುಜರಾತ್ನ ಮುಖ್ಯಮಂತ್ರಿ ಆಗಿದ್ದರು. ಇನ್ನು ಗಲಭೆ ನಂತರ ನಡೆದ ತನಿಖೆಗಳ ಬಗ್ಗೆ ಕೂಡಾ ಡಾಕ್ಯುಮೆಂಟರಿಯಲ್ಲಿ ಉಲ್ಲೇಖ ಇದ್ಯಂತೆ.. ಇದಲ್ಲದೆ ಮೋದಿ ಅವರು ಪ್ರಧಾನಿ ಆದ ಮೇಲೆ ಕೈಗೊಂಡ ಆರ್ಟಿಕಲ್ 370 ರದ್ದತಿ ನಿರ್ಧಾರದ ಬಗ್ಗೆಯೂ ಪ್ರಸ್ತಾಪ ಇದೆ ಅಂತಾ ಖುದ್ದಾಗಿ ಬಿಬಿಸಿ ಸಂಸ್ಥೆಯೇ ಹೇಳಿದೆ.

ಬಿಬಿಸಿಯ ಈ ಸಾಕ್ಷ್ಯಚಿತ್ರಕ್ಕೆ ಭಾರತ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿತ್ತು ಸಾಕ್ಷ್ಯಚಿತ್ರವನ್ನು “ಪ್ರಚಾರದ ತುಣುಕು”… ಇದು ವಸ್ತುನಿಷ್ಠತೆಯ ಕೊರತೆ ಮತ್ತು ವಸಾಹತುಶಾಹಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಕಿಡಿಕಾರಿತ್ತು.

ಇದು ಸುಪ್ರೀಂ ಕೋರ್ಟ್‌ನ ಅಧಿಕಾರ ಮತ್ತು ವಿಶ್ವಾಸಾರ್ಹತೆಯ ಮೇಲೆ ದುಷ್ಪರಿಣಾಮಗಳನ್ನು ಬಿತ್ತರಿಸಲು, ಭಾರತದಲ್ಲಿನ ಸಮುದಾಯಗಳ ನಡುವೆ ವಿಭಜನೆಯನ್ನು ಬಿತ್ತಲು ಮತ್ತು ಕ್ರಮಗಳ ಮೇಲೆ ಆಧಾರರಹಿತ ಆರೋಪಗಳನ್ನು ಮಾಡುವ ಪ್ರಯತ್ನವಾಗಿದೆ ಎಂದೂ ಹೇಳಿತ್ತು.

No Comments

Leave A Comment