ಮೋರ್ಬಿ ಸೇತುವೆ ದುರಸ್ತಿ ಮಾಡಿದ ಗುತ್ತಿಗೆದಾರರು ಆ ಕೆಲಸಕ್ಕೆ ಅರ್ಹರಾಗಿರಲಿಲ್ಲ: ನ್ಯಾಯಾಲಯಕ್ಕೆ ತಿಳಿಸಿದ ಪ್ರಾಸಿಕ್ಯೂಷನ್
ಮೊರ್ಬಿ: ಗುಜರಾತಿನ ಮೊರ್ಬಿಯಲ್ಲಿನ ತೂಗು ಸೇತುವೆಯ ದುರಸ್ತಿ ಮಾಡಿದ ಗುತ್ತಿಗೆದಾರರು ಆ ಕೆಲಸ ನಿರ್ವಹಿಸಲು ಅರ್ಹರಾಗಿರಲಿಲ್ಲ ಎಂದು ಪ್ರಾಸಿಕ್ಯೂಷನ್ ಮಂಗಳವಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ಸೇತುವೆಯ ನೆಲಹಾಸನ್ನು ಬದಲಾಯಿಸಿದಾಗ, ಅದರ ಕೇಬಲ್ ಅನ್ನು ಬದಲಾಯಿಸಲಾಗಿಲ್ಲ ಮತ್ತು ಬದಲಾದ ನೆಲಹಾಸಿನ ತೂಕವನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಫೋರೆನ್ಸಿಕ್ ವರದಿಯನ್ನು ಉಲ್ಲೇಖಿಸಿ ಪ್ರಾಸಿಕ್ಯೂಷನ್ ಈ ಮಾಹಿತಿಯನ್ನು ನ್ಯಾಯಾಲಯಕ್ಕೆ ತಿಳಿಸಿದೆ.
ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಬಂಧಿತ ಆರೋಪಿಗಳಲ್ಲಿ ನಾಲ್ವರನ್ನು OREVA ಗ್ರೂಪ್ನ ಇಬ್ಬರು ವ್ಯವಸ್ಥಾಪಕರು ಮತ್ತು ಸೇತುವೆಯನ್ನು ದುರಸ್ತಿ ಮಾಡಿದ ಇಬ್ಬರು ಉಪ ಗುತ್ತಿಗೆದಾರರನ್ನು ಶನಿವಾರದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎಂ.ಜೆ.ಖಾನ್ ಅವರು ಭದ್ರತಾ ಸಿಬ್ಬಂದಿ ಹಾಗೂ ಟಿಕೆಟ್ ಬುಕಿಂಗ್ ಕ್ಲರ್ಕ್ಗಳು ಸೇರಿದಂತೆ ಇತರ 5 ಮಂದಿ ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಏಕೆಂದರೆ ಪೊಲೀಸರು ತಮ್ಮ ಕಸ್ಟಡಿಗೆ ಕೋರಲಿಲ್ಲ ಎಂದು ಪ್ರಾಸಿಕ್ಯೂಟರ್ ಎಚ್.ಎಸ್. ಪಾಂಚಾಲ್ ತಿಳಿಸಿದ್ದಾರೆ.
ರಿಪೇರಿ ಗುತ್ತಿಗೆದಾರರಿಬ್ಬರೂ ಇಂತಹ ಕಾಮಗಾರಿ ನಡೆಸಲು ಯೋಗ್ಯರಾಗಿರಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
“ಕಾಮಗಾರಿಗೆ ಯೋಗ್ಯರಲ್ಲದ ಹೊರತಾಗಿಯೂ ಈ ಗುತ್ತಿಗೆದಾರರಿಗೆ 2007 ರಲ್ಲಿ ಮತ್ತು ನಂತರ 2022 ರಲ್ಲಿ ಸೇತುವೆಯ ದುರಸ್ತಿ ಕಾರ್ಯವನ್ನು ನೀಡಲಾಯಿತು. ಆದ್ದರಿಂದ ಅವರನ್ನು ಆಯ್ಕೆ ಮಾಡಲು ಕಾರಣವೇನು ಹಾಗೂ ಯಾರ ನಿದರ್ಶನದಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ ಎಂಬುದನ್ನು ಕಂಡುಹಿಡಿಯಲು ಆರೋಪಿಯ ಕಸ್ಟಡಿ ಅಗತ್ಯವಿದೆ” ಎಂದು ಪ್ರಾಸಿಕ್ಯೂಟರ್ ಹೇಳಿದರು.
ಗುಜರಾತ್ನ ಮೊರ್ಬಿಯಲ್ಲಿ ಮಚ್ಚು ನದಿಯ ಮೇಲೆ ಶತಮಾನದಷ್ಟು ಹಳೆಯದಾದ ತೂಗು ಸೇತುವೆ ಕುಸಿದು 141 ಮಂದಿ ಸಾವನ್ನಪ್ಪಿದ್ದಾರೆ. ಸೇತುವೆ ಕುಸಿಯುವ ಮುನ್ನವೇ ಕೆಲವು ವ್ಯಕ್ತಿಗಳು ತೂಗು ಸೇತುವೆಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲುಗಾಡಿಸುವಂತೆ ಮಾಡಲು ಯತ್ನಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ಹೀಗಾಗಿ ಸೇತುವೆ ದುರಂತಕ್ಕೆ ಕಳಪೆ ಕಾಮಗಾರಿ ಕಾರಣವೋ? ಅಥವಾ ನಿರ್ವಾಹಕರು ಸೇತುವೆ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರಿಗೆ ಅನುವು ಮಾಡಿಕೊಟ್ಟಿದ್ದು ಕಾರಣವೋ? ಸೇತುವೆ ಮೇಲಿದ್ದ ಕೆಲ ಕಿಡಿಗೇಡಿಗಳು ಸೇತುವೆ ಅಲುಗಾಡಿಸಿದ್ದು ಕಾರಣವೋ ಎಂಬಿತ್ಯಾದಿ ಪ್ರಶ್ನೆಗಳು ಭುಗಿಲೆದ್ದಿವೆ.