ಚಿಟ್ ಫಂಡ್ ಹೆಸರಲ್ಲಿ ಕೋಟ್ಯಾಂತರ ರೂ. ವಂಚನೆ : ಮಹಿಳೆಯ ಬಂಧನ
ಬೆಂಗಳೂರು : ಚಿಟ್ ಫಂಡ್ ಹೆಸರಿನಲ್ಲಿ ಹೆಚ್ಚಿನ ಲಾಭದ ಆಸೆ ತೋರಿಸಿ ಜನರಿಂದ ಹಣ ಸಂಗ್ರಹಿಸಿ ವಂಚಿಸಿದ್ದ ಮಹಿಳೆಯನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತವಾದ ಮಹಿಳೆ ಕೆಂಗೇರಿ ನಿವಾಸಿ ಲಕ್ಷ್ಮಿ ಅಲಿಯಾಸ್ ವಾಣಿ ಎಂದು ತಿಳಿಯಲಾಗಿದೆ.
ಚಿಟ್ ಫಂಡ್ನಲ್ಲಿ ಹಣ ಹೂಡಿದರೆ ಹೆಚ್ಚಿನ ಆದಾಯ ಸಿಗಲಿದೆ ಎಂದು ಆಮಿಷವೊಡ್ಡಿ ಸುಮಾರು 1.25 ಕೋಟಿ ಹಣ ಸಂಗ್ರಹಿಸಿ ಜನರಿಗೆ ಆರೋಪಿ ವಂಚಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ರಾಜಾಜಿನಗರದ 4ನೇ ಹಂತದಲ್ಲಿ ವಾರಿಧಿ ಚಿಟ್ ಫಂಡ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿ ತೆರೆದಿದ್ದ ಲಕ್ಷ್ಮಿ, ತನ್ನ ಮಕ್ಕಳ ಜತೆ ಕೆಂಗೇರಿಯ ಬೆಮೆಲ್ ಲೇಔಟ್ನಲ್ಲಿ ನೆಲೆಸಿದ್ದಳು. ಅಲ್ಪಾವಧಿಯಲ್ಲೇ ಲಾಭ ಕೊಡುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಿದ ಆರೋಪಿ, ಬಳಿಕ ಆ ಹಣದಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದಳು.
ಈ ರೀತಿ ಸಂಪಾದಿಸಿದ ಹಣದಲ್ಲಿ ಲಕ್ಷ್ಮೇ ಐಷಾರಾಮಿ ಜೀವನ ಕೂಡ ನಡೆಸುತ್ತಿದ್ದಳು. ಆದರೆ ಸಕಾಲಕ್ಕೆ ಗ್ರಾಹಕರಿಗೆ ಆದಾಯ ಹಂಚಿಕೆ ಮಾಡದೆ ಹೋದಾಗ ಆಕೆಯ ವಿರುದ್ಧ ಗ್ರಾಹಕರು ತಿರುಗಿ ಬಿದ್ದರು. ಆಗ ಬಸವೇಶ್ವರ ನಗರದಲ್ಲಿ ಮನೆ ಖಾಲಿ ಮಾಡಿ ಕೆಂಗೇರಿಗೆ ಆರೋಪಿ ವಾಸ್ತವ್ಯ ಬದಲಾಯಿಸಿದ್ದಳು. ಕೊನೆಗೆ ಹಣ ಖರ್ಚಾದ ಬಳಿಕ ಕಲ್ಯಾಣ ಮಂಟಪದಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.