ಕ್ರೂಸರ್ ಮರಕ್ಕೆ ಢಿಕ್ಕಿ ಹೊಡೆದು ಸ್ಥಳದಲ್ಲೇ 7 ಮಂದಿ ಸಾವು
ಧಾರವಾಡ: ಮರಕ್ಕೆ ಕ್ರೂಸರ್ ವಾಹನ ಢಿಕ್ಕಿ ಹೊಡೆದು ಸ್ಥಳದಲ್ಲೇ 7 ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ಧಾರವಾಡ ತಾಲೂಕಿನ ಬಾಡ್ ಗ್ರಾಮದ ಬಳಿ ಇಂದು ಬೆಳಗ್ಗಿನ ನಸುಕಿನ ಜಾವ ನಡೆದಿದೆ. ಮೃತ ಪಟ್ಟವರನ್ನು ಅನನ್ಯ, ಹರೀಶ, ಶಿಲ್ಪಾ, ನೀಲವ್ವ, ಮಧುಶ್ರೀ, ಮಹೇಶ್ವರಯ್ಯ ಹಾಗೂ ಶಂಭುಲಿಂಗಯ್ಯ ಎಂದು ಗುರುತಿಸಲಾಗಿದೆ.
ಘಟನೆ ಸಂದರ್ಭ ಆರು ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಕಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ಧಾರವಾಡ ತಾಲೂಕಿನ ಬೆನಕಟ್ಟಿ ಗ್ರಾಮದವರು ಎಂದು ತಿಳಿದುಬಂದಿದೆ. ಎಲ್ಲರು ಮದುವೆಗೆ ಹೋಗಿದ್ದರು. ನಿಗದಿ ಗ್ರಾಮದಲ್ಲಿ ಮದುವೆ ನಡೆಯಬೇಕಿತ್ತು. ಆದರೆ ಮಳೆ ಕಾರಣ ಮನ್ಸೂರ ರೇವಣಸಿದ್ದೇಶ್ವರ ಮಠಕ್ಕೆ ಸಂಬಂಧಿ ನಿಗದಿ ಗ್ರಾಮದ ಯುವಕನ ಮದುವೆ ಸ್ಥಳಾಂತರವಾಗಿದ್ದು, ಇಂದು ಮದುವೆ ನಡೆಯಬೇಕಿತ್ತು. ಯುವಕನ ಮದುವೆಯ ವೀಳ್ಯಶಾಸ್ತ್ರ ಮುಗಿಸಿಕೊಂಡು ಬರುತ್ತಿದ್ದಾಗ ದುರಂತ ಘಟಿಸಿದೆ.
ಘಟನಾ ಸ್ಥಳಕ್ಕೆ ಧಾರವಾಡ ಎಸ್ಪಿ ಕೃಷ್ಣಕಾಂತ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.