ಗಲಭೆಗೆ ಸಂಚು ರೂಪಿಸಿದ್ದ ಮೂವರ ಸೆರೆ; ಜೀವಂತ ಗುಂಡು, ಪೆಟ್ರೋಲ್ ಬಾಂಬ್ ವಶ
ಬೆಂಗಳೂರು: ಗಲಭೆ ಸೃಷ್ಟಿಸಲು ಪೆಟ್ರೋಲ್ ಬಾಂಬ್ ಸಂಗ್ರಹಿಸಿದ್ದ ಮೂವರು ಆರೋಪಿಗಳನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದು, ಸಂಭಾವ್ಯ ಗಲಭೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಸರಾಯಿ ಪಾಳ್ಯದ ಮುನಾವರ್ ಪಾಷಾ, ಸೈಯದ್ ಹುಸೇನ್, ಸಿಕ್ಕಂದರ್ ಬಂಧಿತ ಆರೋಪಿಗಳಾಗಿದ್ದು ಇವರ ಬಂಧನದಿಂದ ಗಲಭೆ ನಡೆಯುವುದನ್ನು ಹತ್ತಿಕ್ಕಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ಬಂಧಿತರಿಂದ 1 ನಾಡಾ ಪಿಸ್ತೂಲ್, 1 ಜೀವಂತ ಗುಂಡು, 10 ಬಿಯರ್ ಬಾಟಲ್, ಲಾಂಗು, ಮಚ್ಚುಗಳು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೂರ್ವ ವಿಭಾಗದಲ್ಲಿ ರೌಡಿ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾವಹಿಸಲಾಗಿದ್ದು ಬಂಧಿತ ಮುನಾವರ್ ಬಳಿ ಲಾಂಗು ಪಿಸ್ತೂಲ್ ಇರುವ ಬಗ್ಗೆ ಖಚಿತ ಮಾಹಿತಿ ಕಾರ್ಯಚರಣೆ ನಡೆಸಿ ಪಿಸ್ತೂಲ್ ಜೊತೆಗೆ ಒಂದು ಜೀವಂತ ಗುಂಡು ವಶಪಡಿಸಿಕೊಳ್ಳಲಾಗಿದೆ. ರೌಡಿ ಶೀಟರ್ ಮೊಹ್ಮದ್ ಅಸೀಬುಲ್ಲಾ ಖಾನ್ ತನ್ನ ಗುಂಪಿನೊಂದಿಗೆ ಗಲಭೆ ಉಂಟು ಮಾಡಲು ಸಂಚು ಮಾಡಿರುವ ಮಾಹಿತಿ ಬಂದಿತ್ತು. ಈ ಸಂಬಂಧ ತನಿಖೆ ನಡೆಸಿದಾಗ ಪ್ರಕರಣದ ಜಾಡು ಪತ್ತೆಯಾಗಿದೆ.
ಆರೋಪಿ ಸೈಯದ್ ಅಸ್ಗರ್ ನನ್ನು ಬಂಧಿಸಿದಾಗ 19 ಬಾಟಲ್ಗಳು ಸಿಕ್ಕಿದ್ದು ಅದರಲ್ಲಿ 10 ಬಾಟಲ್ಗಳಲ್ಲಿ ಪೆಟ್ರೋಲ್ ಬಾಂಬ್ ಇರುವುದು ಗೊತ್ತಾಗಿದೆ. ಆತನನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಅಸೀಬುಲ್ಲಾಖಾನ್ ಎಂಬಾತ ನನಗೆ ಗಲಭೆ ನಡೆಸಲು ಪೆಟ್ರೋಲ್ ಬಾಂಬ್ ತಯಾರಿಸಲು ಹೇಳಿದ್ದ ಎಂದು ಬಾಯ್ಬಿಟ್ಟಿದ್ದ. ತೀವ್ರ ತನಿಖೆ ನಡೆಸಿದಾಗ ಆರೋಪಿ ಅಸ್ಗರ್ ತಾನೇ ಪೆಟ್ರೋಲ್ ತಂದು ಪೆಟ್ರೋಲ್ ಬಾಂಬ್ ಶೇಖರಿಸಿದ್ದು ಗೊತ್ತಾಯಿತು. ತನಿಖೆ ವೇಳೆ ಫೈಯಾಜುಲ್ಲಾ ಖಾನ್ ಎಂಬಾತ ಆರೋಪಿ ಅಸ್ಗರ್ ಗೆ ಹಣ ಕೊಟ್ಟು ಮಾಡಿಸಿರುವುದು ತಿಳಿದುಬಂದಿದೆ.
ಮತ್ತಷ್ಟು ತನಿಖೆ ನಡೆಸಿದಾಗ ಫೈಯಾಜುಲ್ಲಾ ಖಾನ್ ಅಸೀಬುಲ್ಲಾಖಾನ್ ಖಾನ್ ಮಧ್ಯೆ ಪರಿಚಯವಿತ್ತು. ಅಸೀಬುಲ್ಲಾಖಾನ್ ಈ ಹಿಂದೆ ಬೆದರಿಸಿ ಫೈಯಾಜುಲ್ಲ ಮನೆಯನ್ನು ಖಾಲಿ ಮಾಡಿಸಿದ್ದ. ಈ ವೇಳೆ ಫೈಯಾಜುಲ್ಲನಿಗೆ 10 ಲಕ್ಷ ರೂ ನಷ್ಟ ಉಂಟಾಗಿದ್ದು ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡಿ ಅಸ್ಗರ್ ಗೆ ಹೇಳಿ ಪೆಟ್ರೋಲ್ ಬಾಂಬ್ ತರಲು ಹೇಳಿದ್ದ ಎನ್ನಲಾಗಿದೆ. ಆರೋಪಿ ಫಯಾಜ್ ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ, ಬಾಗಲೂರು, ಮಾರ್ಕೆಟ್, ಬಾಣಸವಾಡಿ ಹಾಗೂ ಕಾಟನ್ ಪೇಟೆ ಪೊಲೀಸ್ ಠಾಣೆಗಳಲ್ಲಿ, ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣಗಳು ಸೇರಿದಂತೆ ಒಟ್ಟು 8 ಪ್ರಕರಣಗಳಿವೆ. ಸೈಯದ್ ಅಸ್ಗರ್ ವಿರುದ್ಧ ಅಮೃತಹಳ್ಳಿ, ಪೊಲೀಸ್ ಠಾಣೆಯಲ್ಲಿ ವಿಗ್ರಹ ಕಳವು ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.