ಕಾಪು: ಗುಜರಿ ಅಂಗಡಿಯಲ್ಲಿ ಸ್ಪೋಟ ಪ್ರಕರಣ-ಮತ್ತಿಬ್ಬರು ಸಾವು-ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ
ಕಾಪು:ಮಾ ,24: ಮಲ್ಲಾರು ಗ್ರಾಮದ ಗುಡ್ಡೇಕೆರಿ ಸಲಫಿ ಮಸೀದಿ ಸನಿಹದ ಗುಜರಿ ಅಂಗಡಿಯಲ್ಲಿ ನಡೆದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಮೃತ ವ್ಯಕ್ತಿಗಳನ್ನು ಸಾಗರ ಮೂಲದ ನಯಾಝ್ (36) ಹಾಗೂ ವೀರಪ್ಪ ಎಂದು ಗುರುತಿಸಲಾಗಿದೆ. ಮೃತ ನಯಾಝ್ ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.
ಗುಜರಿ ಅಂಗಡಿಯಲ್ಲಿ ಮಾರ್ಚ್ 21ರಂದು ಬೆಳಗ್ಗೆ ಕಂಪ್ರೆಸರ್ ನ್ನು ಗ್ಯಾಸ್ ಕಟರ್ ಮೂಲಕ ತುಂಡರಿಸುತ್ತಿದ್ದ ವೇಳೆ ಸ್ಪೋಟ ಸಂಭವಿಸಿ ಮಲ್ಲಾರಿನ ರಝಾಬ್ ಮತ್ತು ಚಂದ್ರನಗರದ ರಝಾಬ್ ಸಜೀವದಹನವಾಗಿದ್ದರು. ಐವರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಾಯಾಳುಗಳ ಪೈಕಿ ಹಸನಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.