‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿ ಸುದ್ದಿಯಾದ ವಿದ್ಯಾರ್ಥಿನಿ ಮುಸ್ಕಾನ್: ಮುಂಬೈ ಶಾಸಕ ಭೇಟಿ ನೀಡಿ ಭರ್ಜರಿ ಗಿಫ್ಟ್ ಉಡುಗೊರೆ!
ಮಂಡ್ಯ: ಕಾಲೇಜು ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಗುಂಪು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದಾಗ ಅದಕ್ಕೆ ಪ್ರತಿಯಾಗಿ ಮುಸ್ಕಾನ್ ಎಂಬ ವಿದ್ಯಾರ್ಥಿನಿ ಧೈರ್ಯವಾಗಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದು (allah hu akbar) ಎಲ್ಲೆಡೆ ಸುದ್ದಿಯಾಗಿತ್ತು.
ಇದು ನಡೆದಿದ್ದು ಮಂಡ್ಯದ ಪಿಇಎಸ್ ಕಾಲೇಜು ಆವರಣದಲ್ಲಿ. ಮಂಡ್ಯದ ದ್ವಿತೀಯ ಬಿ ಕಾಂ ವಿದ್ಯಾರ್ಥಿನಿ ಮುಸ್ಕಾನ್ (muskan) ಅಲ್ಲಾಹು ಅಕ್ಬರ್ ಎಂದು ಕೂಗಿದ್ದಕ್ಕೆ ಅನೇಕ ಮುಸ್ಲಿಂ ಮುಖಂಡರು, ಕಾಂಗ್ರೆಸ್ ನಾಯಕರು ಶ್ಲಾಘಿಸಿದ್ದರು. ಮುಸ್ಲಿಂ ಸಂಘಟನೆಯೊಂದು ಯುವತಿಗೆ 5 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿತ್ತು.
ಇದೀಗ ಮುಂಬೈನ ಬಾಂದ್ರಾ ಪೂರ್ವ ಕ್ಷೇತ್ರದ ಶಾಸಕ ಜಿಶಾನ್ ಸಿದ್ದಿಕ್ ಕೂಡ ಮುಸ್ಕಾನ್ ಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಇಂದು ಮಂಡ್ಯದ ಗುತ್ತಲು ಬಡಾವಣೆಯಲ್ಲಿರುವ ಮುಸ್ಕಾನ್ ಮನೆಗೆ ಭೇಟಿ ನೀಡಿದ ಮಹಾರಾಷ್ಟ್ರದ ಶಾಸಕ ಜಿಶಾನ್ ಸಿದ್ದಿಕ್ (Bandra MLA Zeeshan Siddique) ಆಕೆಗೆ ಐ ಫೋನ್ ಮತ್ತು ಸ್ಮಾರ್ಟ್ವಾಚ್ ಉಡುಗೊರೆ ನೀಡಿ ಸನ್ಮಾನಿಸಿದ್ದಾರೆ.
ಮುಸ್ಕಾನ್ ಘೋಷಣೆ ಕೂಗಿರುವುದು ನನಗೆ ಹೆಮ್ಮೆ ಅನಿಸಿದೆ. ಮಂಡ್ಯದಿಂದ ಇಂಡಿಯಾವರೆಗೂ ಆಕೆ ಬಗ್ಗೆ ಗರ್ವ ಪಡುತ್ತಿದೆ. ಹಿಜಾಬ್ ಧರಿಸುವುದು ಮುಸ್ಲಿಂ ಹೆಣ್ಣುಮಕ್ಕಳ ಹಕ್ಕು. ಹೆಣ್ಣುಮಕ್ಕಳು ತಮ್ಮ ಹಕ್ಕಿನ ಬಗ್ಗೆ ಧೈರ್ಯದಿಂದ ಧ್ವನಿ ಎತ್ತಿದ್ದಾರೆ ಎಂದು ಶಾಸಕ ಜಿಶಾನ್ ಸಿದ್ದಿಕ್ ಹೇಳಿದ್ದಾರೆ.
ಮುಸ್ಕಾನ್ ಗೆ ಉಡುಗೊರೆಗಳು ಹರಿದು ಬರುತ್ತಿವೆ. ಇದಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಇನ್ನು ಕೆಲವರು ಹಣ, ಉಡುಗೊರೆ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.