Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಕೋವಿಡ್ ಹೆಚ್ಚಳ, ಹೈಕೋರ್ಟ್ ತಪರಾಕಿ ನಂತರ ಮೇಕೆದಾಟು ಪಾದಯಾತ್ರೆ ಮೊಟಕು: 5 ದಿನಕ್ಕೆ ಅಂತ್ಯ

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚುತ್ತಿದ್ದರೂ ಮೇಕೆದಾಟು ಪಾದಯಾತ್ರೆ ಮುಂದುವರಿಸುವುದರ ಔಚಿತ್ಯ ಪ್ರಶ್ನಿಸಿ ಛೀಮಾರಿ ಹಾಕಿದ ನಂತರ, ಹೈಕಮಾಂಡ್ ಸೂಚನೆಯಂತೆ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಕೈಗೊಂಡಿದ್ದ ಪಾದಯಾತ್ರೆಯನ್ನು ಮೊಟಕುಗೊಳಿಸಿದ್ದಾರೆ.

ಇಂದು ರಾಮನಗರದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸದ್ಯಕ್ಕೆ ಮೇಕೆದಾಟು ಪಾದಯಾತ್ರೆಯನ್ನು ಮೊಟಕುಗೊಳಿಸಿ ಕೊರೋನಾ ಸೋಂಕು ತಗ್ಗಿದ ನಂತರ ಮತ್ತೆ ಮುಂದುವರಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಮೂಲಕ ಕಾಂಗ್ರೆಸ್ ನಾಯಕರ 11 ದಿನಗಳ ಮೇಕೆದಾಟು ಪಾದಯಾತ್ರೆ 5ನೇ ದಿನಕ್ಕೆ ಅಂತ್ಯವಾಗಿದೆ. ಸರ್ಕಾರದ ಆದೇಶ ಮತ್ತು ಹೈಕೋರ್ಟ್‌ ನೋಟಿಸ್‌ ನೀಡಿದ ಹಿನ್ನೆಲೆಯಲ್ಲಿ ಇಂದು ರಾಮನಗರ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಪಾದಯಾತ್ರೆಯನ್ನು ಕೊನೆಗೊಳಿಸುವ ಬಗ್ಗೆಯೇ ಹೆಚ್ಚಿನ ನಾಯಕರು ಒಲವು ವ್ಯಕ್ತಪಡಿಸಿದ್ದರಿಂದ ಇಂದಿಗೆ ಪಾದಯಾತ್ರೆ ಕೊನೆಯಾಗಲಿದೆ.

ಹೇಗಿದ್ದರೂ ನ್ಯಾಯಾಲಯ ನಾಳೆ ಪಾದಯಾತ್ರೆ ರದ್ದು ಮಾಡುವ ಬಗ್ಗೆ ಸೂಚನೆ ನೀಡಲಿದೆ. ಆ ಕಾರಣಕ್ಕೆ ಸರ್ಕಾರ ಈಗ ನಿರ್ಬಂಧ ವಿಧಿಸಿದೆ. ನಾವು ಅದನ್ನು ಮೀರಿದರೆ ಕೋರ್ಟ್ ಅಸಮಾಧಾನ ಹೊರ ಹಾಕಿ ಕಟು ಪದಗಳಿಂದ ತರಾಟೆಗೆ ತೆಗೆದುಕೊಳ್ಳಬಹುದು. ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡು ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸಿತು ಎನ್ನಿಸಿಕೊಳ್ಳುವುದು ಒಂದು ರೀತಿಯ ಹಿನ್ನಡೆ ಆದಂತೆ. ಅದೇ ಸರ್ಕಾರ ಪಾದಯಾತ್ರೆ ಮೇಲೆ ನಿರ್ಬಂಧ ಹೇರಿದ ಕಾರಣಕ್ಕೆ ಪಾದಯಾತ್ರೆ ಕೊನೆಯಾದರೆ ಪಕ್ಷಕ್ಕೆ ಇದರಿಂದ ಲಾಭ. ನಮ್ಮ ನೀರಿನ ಹೋರಾಟಕ್ಕೆ ಬಿಜೆಪಿ ತಡೆ ಹಾಕಿತು ಎಂದು ಬಿಂಬಿಸಿದರೆ ಲಾಭ ಹೆಚ್ಚು ಎಂದು ಇಂದು ಸಭೆಯಲ್ಲಿ ಅನೇಕ ಕಾಂಗ್ರೆಸ್ ನಾಯಕರು ಸಲಹೆ, ಅಭಿಪ್ರಾಯ ಹೊರಹಾಕಿದರು ಎಂದು ತಿಳಿದುಬಂದಿದೆ.

ಕೊರೋನಾ ಇಳಿಕೆಯಾದ ನಂತರ ರಾಮನಗರದಿಂದಲೇ ಮುಂದುವರಿಕೆ: ಇಂದು ಬೆಳಗ್ಗೆ ರಾಮನಗರದಿಂದ ಪಾದಯಾತ್ರೆ ಮುಂದುವರಿಯಬೇಕಿತ್ತು. ಕಲಾತಂಡಗಳ ಸುಮಾರು 300 ಕಲಾವಿದರು ರಾಮನಗರದಲ್ಲಿ ಕಾದು ಕುಳಿತಿದ್ದರು. ಆದರೆ ಹೈಕೋರ್ಟ್ ಆದೇಶ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರ ಬರೆದು ಮನವಿ ಮಾಡಿಕೊಂಡ ನಂತರ ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗಬಾರದು ಎಂದು ಪಾದಯಾತ್ರೆ ಮೊಟಕುಗೊಳಿಸಲಾಗಿದೆ. ಕೊರೋನಾ ಕಡಿಮೆಯಾದ ನಂತರ ರಾಮನಗರದಿಂದಲೇ ಪಾದಯಾತ್ರೆ ಮುಂದುವರಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಇನ್ನು ಕೆಲ ಹೊತ್ತಿನಲ್ಲಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡುವ ಸಾಧ್ಯತೆಯಿದೆ.

No Comments

Leave A Comment