ಉಡುಪಿ : ‘ಕೃಷ್ಣಮಠ ವಶಕ್ಕೆ ಮುಂದಾಗಿದ್ದ ಕಾಂಗ್ರೆಸ್ ಸರ್ಕಾರ ‘ – ಪ್ರಮೋದ್ ಮಧ್ವರಾಜ್
ಉಡುಪಿ: ಡಿ 24: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉಡುಪಿ ಶ್ರೀ ಕೃಷ್ಣ ಮಠವನ್ನು ಧಾರ್ಮಿಕ ದತ್ತಿ ಇಲಾಖೆಗೆ ಸೇರಿಸುವ ಹುನ್ನಾರ ನಡೆಸಿತ್ತು ಎಂಬುದನ್ನು ಅವರ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದವರೇ ಬಹಿರಂಗಪಡಿಸಿದ್ದರು ಎಂದು ಕೃಷ್ಣ ಮಠದ ರಾಜಾಂಗಣದಲ್ಲಿ ಅದಮಾರು ಪರ್ಯಾಯ ಸಮಾಪನ ಪ್ರಯುಕ್ತ ನಡೆಯುತ್ತಿರುವ ‘ವಿಶ್ವಾರ್ಪಣಂ’ ಕಾರ್ಯಕ್ರಮದಲ್ಲಿ ಗುರುವಾರ ಭಾಗವಹಿಸಿದ್ದ ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಈ ಮಾಹಿತಿ ನೀಡಿದ್ದಾರೆ.
ಹಿಂದಿನ ಸರ್ಕಾರ ಕೃಷ್ಣ ಮಠವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಯೋಚನೆ ಮಾಡಿತ್ತು. ಈ ಸುದ್ದಿ ತಿಳಿದ ತಕ್ಷಣ ಮುಖ್ಯಮಂತ್ರಿಯವರನ್ನು ಸಂಪರ್ಕಿಸಿ, ‘ಉಡುಪಿ ಕೃಷ್ಣ ಮಠಕ್ಕೆ ಏನಾದರೂ ತೊಂದರೆಯಾದರೆ ಶಾಸಕ ಸ್ಥಾನಕ್ಕೆ ಮೊದಲು ರಾಜೀನಾಮೆ ಕೊಡುವವ ನಾನಾಗಿರುತ್ತೇನೆ’ ಎಂಬುದಾಗಿ ಹೇಳಿ ಈ ಪ್ರಸ್ತಾವನೆಗೆ ಪೂರ್ಣವಿರಾಮ ಹಾಕುವ ಸಣ್ಣ ಸೇವೆ ಮಾಡಿದ್ದೇನೆ. ಈ ಬಗ್ಗೆ ನನಗೆ ತೃಪ್ತಿ ಇದೆ ಎಂದು ಹೇಳಿದರು.
ಪಲಿಮಾರು ಶ್ರೀಗಳ ಪರ್ಯಾಯದಲ್ಲಿ ಮಧ್ವ ಸರೋವರಕ್ಕೆ ಹಾಗೂ ಸುತ್ತಮುತ್ತಲಿನ ಮಠದ ಬಾವಿಗಳಿಗೆ ಡ್ರೈನೇಜ್ ನೀರು ಬರುತ್ತಿತ್ತು. ಹೀಗಾಗಿ ನಗರಸಭೆಯಿಂದ 45 ಲಕ್ಷ ರೂ. ಅನುದಾನ ಕಲ್ಪಿಸಿ ಒಳಚರಂಡಿ ವ್ಯವಸ್ಥೆ ಸರಿಪಡಿಸಲಾಗಿತ್ತು ಎಂದರು. ಪ್ರಮಾಣವಚನಕ್ಕೆ ಪಿಐಎಲ್ ಉಡುಪಿ ಕೃಷ್ಣ -ಮುಖ್ಯಪ್ರಾಣ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಕ್ಕೆ ಕೆಲವರು ನನ್ನನ್ನು ಶಾಸಕ ಸ್ಥಾನದಿಂದ ಅನೂರ್ಜಿತಗೊಳಿಸುವಂತೆ ಹೈಕೋರ್ಟ್ಗೆ ಪಿಐಎಲ್ ಹಾಕಿದ್ದರು. ಇದರಿಂದ ನನಗೇನು ತೊಂದರೆಯಾಗಿಲ್ಲ. ಆದರೆ ಇಂಥ ಮನಸ್ಥಿತಿಯ ಜನರೂ ಜಗತ್ತಿನಲ್ಲಿದ್ದಾರೆ ಎಂದು ಪ್ರಮೋದ್ ಹೇಳಿದರು.
ಈ ವೇಳೆ ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಉಪಸ್ಥಿತರಿದ್ದರು.