ರಾಜಸ್ಥಾನದಲ್ಲಿ ಭೀಕರ ಅಪಘಾತ; ಬೆಂಕಿ ಹೊತ್ತಿ ಉರಿದ ಬಸ್ನಲ್ಲಿದ್ದ 12 ಮಂದಿ ಸಜೀವ ದಹನ
ಖಾಸಗಿ ಬಸ್ ಮತ್ತು ಟ್ಯಾಂಕರ್ ಡಿಕ್ಕಿಯಾದ ಪರಿಣಾಮ ಬಸ್ಗೆ ಬೆಂಕಿ ಹೊತ್ತಿಕೊಂಡು ಸುಮಾರು 12 ಮಂದಿ ಸಜೀವ ದಹನವಾದ ದುರ್ಘಟನೆ ರಾಜಸ್ಥಾನದ ಬಾರ್ಮರ್-ಜೋಧ್ಪುರ ಹೆದ್ದಾರಿಯಲ್ಲಿ ನಡೆದಿದೆ. ಈ ಖಾಸಗಿ ಬಸ್ನಲ್ಲಿ ಸುಮಾರು 25 ಮಂದಿ ಪ್ರಯಾಣಿಕರು ಇದ್ದರು. ಸ್ಥಳಕ್ಕೆ ಧಾವಿಸಿರುವ ರಕ್ಷಣಾ ಸಿಬ್ಬಂದಿ 10 ಮೃತದೇಹಗಳನ್ನು ಬಸ್ನಿಂದ ಹೊರತೆಗೆದಿದ್ದಾರೆ. ಈ ಬಸ್ ಬಲೋತ್ರಾದಿಂದ ಬೆಳಗ್ಗೆ 9.55ಕ್ಕೆ ಹೊರಟಿತ್ತು.
ಟ್ಯಾಂಕರ್ ಎದುರಿನಿಂದ ಬಂದು ಡಿಕ್ಕಿಹೊಡೆದಿದೆ. ಇದರಲ್ಲಿ ಟ್ಯಾಂಕರ್ ಚಾಲಕ ರಸ್ತೆಯ ತಪ್ಪಾದ ಬದಿಯಲ್ಲಿ ವಾಹನ ಚಲಾಯಿಸಿಕೊಂಡು ಬಂದಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಟ್ಯಾಂಕರ್ ಡಿಕ್ಕಿಯಾಗುತ್ತಿದ್ದಂತೆ ಒಮ್ಮೆಲೇ ಬಸ್ಗೆ ಬೆಂಕಿ ತಗುಲಿದೆ. ಈ ಹೆದ್ದಾರಿಯಲ್ಲಿ ಸಿಕ್ಕಾಪಟೆ ಟ್ರಾಫಿಕ್ ಜಾಮ್ ಆಗಿದೆ. ಸ್ಥಳದಲ್ಲಿ ಅನೇಕ ಪೊಲೀಸ್ ಸಿಬ್ಬಂದಿಯಿದ್ದು, ರಕ್ಷಣಾ ಕಾರ್ಯಾಚರಣೆಯೂ ನಡೆಯುತ್ತಿದೆ. ಪಚ್ಪದ್ರ ಶಾಸಕ ಮದನ್ ಪ್ರಜಾಪತ್, ಉಸ್ತುವಾರಿ ಸಚಿವ ಸುಖರಾಮ್ ವಿಷ್ಣೋಯ್ ಇನ್ನಿತರ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಮುಖ್ಯಮಂತ್ರಿ ಸಂತಾಪ ಖಾಸಗಿ ಬಸ್ ಮತ್ತು ಟ್ಯಾಂಕರ್ ನಡುವಿನ ಅಪಘಾತದಲ್ಲಿ 12 ಮಂದಿ ಮೃತಪಟ್ಟಿದ್ದಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ಸೂಚಿಸಿದ್ದಾರೆ. ಬಾರ್ಮರ್ ಜಿಲ್ಲಾಧಿಕಾರಿಯೊಟ್ಟಿಗೆ ಮಾತನಾಡಿದ್ದೇನೆ. ರಕ್ಷಣಾ ಕಾರ್ಯಾಚರಣೆ ಕುರಿತಾಗಿ ಅವರಿಗೆ ನಿರ್ದೇಶನ ನೀಡಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಎಲ್ಲ ವ್ಯವಸ್ಥೆ ಮಾಡಲಾಗುವುದು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.