ಇಡೀ ನಗರ ಸುತ್ತುವರೆದಿದ್ದೀರಿ, ಈಗ ನೀವು ಒಳಗೆ ಬಂದು ಪ್ರತಿಭಟಿಸಲು ಬಯಸುತ್ತೀರಿ: ರೈತರ ಪ್ರತಿಭಟನೆಗೆ ಸುಪ್ರೀಂ ಆಕ್ರೋಶ
ನವದೆಹಲಿ: “ನೀವು ಇಡೀ ನಗರವನ್ನು ಸುತ್ತುವರೆದು ಉಸಿರುಗಟ್ಟುವಂತೆ ಮಾಡಿದ್ದೀರಿ. ಈಗ ನೀವು ಒಳಗೆ ಬಂದು ಮತ್ತೆ ಇಲ್ಲಿ ಪ್ರತಿಭಟನೆ ಆರಂಭಿಸಲು ಬಯಸುತ್ತೀರಿ. ಆದರೆ ಈ ಕುರಿತು ಸಮತೋಲನದ ನಿರ್ಧಾರ ಅಗತ್ಯ” ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳಿಗೆ ತಿಳಿಸಿದೆ.
ದೆಹಲಿ ಜಂತರ್ ಮಂತರ್ನಲ್ಲಿ ‘ಸತ್ಯಾಗ್ರಹ’ ನಡೆಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಕಿಸಾನ್ ಮಹಾಪಂಚಾಯತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ ಎಂ ಖನ್ವಿಲ್ಕರ್ ಮತ್ತು ಸಿ ಟಿ ರವಿಕುಮಾರ್ ನೇತೃತ್ವದ ಪೀಠ, ಒಮ್ಮೆ ಕೃಷಿ ಕಾನೂನುಗಳನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ ನಂತರವೂ ಪ್ರತಿಭಟನೆ ಮುಂದುವರಿಸುವುದರ ಅರ್ಥವೇನು? ಎಂದು ರೈತ ಸಂಘಟನೆಯನ್ನು ಪ್ರಶ್ನಿಸಿತು.
ರೈತರಿಗೆ ಪ್ರತಿಭಟನೆ ನಡೆಸುವ ಹಕ್ಕು ಇರುವಂತೆ ನಾಗರಿಕರು ಸಹ ಮುಕ್ತವಾಗಿ ಮತ್ತು ಭಯವಿಲ್ಲದೆ ಸಂಚರಿಸುವ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಈ ಬಗ್ಗೆ ಸಮತೋಲನದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕೋರ್ಟ್ ಹೇಳಿದೆ.
ನಿಮ್ಮ ಪ್ರತಿಭಟನೆಯಿಂದ ನಮಗೆ ಯಾವುದೇ ತೊಂದರೆ ಇಲ್ಲ. ನಾವು “ಸಂತೋಷವಾಗಿದ್ದೇವೆ” ಎಂದು ಈ ಪ್ರದೇಶದ ನಿವಾಸಿಗಳಿಂದ ಅನುಮತಿ ಪಡೆಯುತ್ತಾರೆಯೇ? ಎಂದು ಕೋರ್ಟ್ ರೈತ ಸಂಘಟನೆಯ ಪರ ವಕೀಲರನ್ನು ಪ್ರಶ್ನಿಸಿತು ಮತ್ತು ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿದೆ.
ರೈತರು ಮತ್ತು ಕೃಷಿಕರ ಸಂಘಟನೆಯಾದ ‘ಕಿಸಾನ್ ಮಹಾಪಂಚಾಯತ್’ ಮತ್ತು ಅದರ ಅಧ್ಯಕ್ಷರು ಜಂತರ್ ಮಂತರ್ನಲ್ಲಿ ಶಾಂತಿಯುತವಾಗಿ ಪ್ರತಿಭಟಿಸಲು ಕನಿಷ್ಠ 200 ರೈತರು ಅಥವಾ ಪ್ರತಿಭಟನಾಕಾರರಿಗೆ ಸ್ಥಳಾವಕಾಶ ನೀಡುವಂತೆ ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.