ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ: ಮತ್ತೊಂದು ವಿಡಿಯೋ ಬಿಡುಗಡೆ, ಎಸ್ಐಟಿ ಬಗ್ಗೆ ಸಂಶಯ ವ್ಯಕ್ತಪಡಿಸಿದ ಸಿಡಿ ಯುವತಿ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ಐಟಿಗೆ ವಹಿಸಿದ್ದು, ಸಿಡಿ ಯುವತಿ ಎಸ್ಐಟಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾಳೆ.
ಇಂದು ಅಜ್ಞಾತ ಸ್ಥಳದಿಂದ ಮತ್ತೊಂದು ವಿಡಿಯೋ ಹರಿಬಿಟ್ಟಿರುವ ಯುವತಿ, ಎಸ್ಐಟಿ ಯಾರ ಪರ ಇದ್ದಾರೆ? ಎಂದು ಪ್ರಶ್ನಿಸಿದ್ದಾಳೆ.
ನನಗೆ ನನ್ನ ತಂದೆ-ತಾಯಿಯ ಸುರಕ್ಷತೆ ಮುಖ್ಯ. ನನ್ನ ತಂದೆತಾಯಿಗೆ ನಾನು ತಪ್ಪೇ ಮಾಡಿಲ್ಲ ಎಂಬುದು ಗೊತ್ತಿದೆ. ನನ್ನ ಅಪ್ಪ ಅಮ್ಮ ಸ್ವ-ಇಚ್ಛೆಯಿಂದ ದೂರು ಕೊಡಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ನನ್ನ ತಂದೆ-ತಾಯಿಗೆ ರಕ್ಷಣೆ ನೀಡುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಮೇಶ್ ಜಾರಕಿಹೊಳಿ ಹಾಗೂ ಮಹಿಳಾ ಸಂಘಟನೆಗೆ ಯುವತಿ ಮನವಿ ಮಾಡಿದ್ದಾಳೆ.
ನನ್ನ ತಂದೆ-ತಾಯಿ ಸುರಕ್ಷಿತವಾಗಿದ್ದಾರೆ ಎಂಬುದು ಖಾತ್ರಿಯಾದ ಬಳಿಕವೇ ನಾನು ಎಸ್ಐಟಿ ಮುಂದೆ ಹಾಜರಾಗಿ ಹೇಳಿಕೆ ನೀಡುತ್ತೇನೆ ಎಂದಿದ್ದಾಳೆ.
ಮಾ.12ರಂದು ಕಮಿಷನರ್ ಹಾಗೂ ಎಸ್ಐಟಿಗೆ ನಾನೊಂದು ವಿಡಿಯೋ ಮಾಡಿ ತಲುಪಿಸಿದ್ದು, ನಾನು ಎಸ್ಐಟಿಗೂ ತಲುಪಿಸಿದ್ದೇನೆ. ಆದರೆ ಮಾರ್ಚ್ 13 ರಂದು ರಮೇಶ್ ಜಾರಕಿಹೊಳಿ ತರಾತುರಿಯಲ್ಲಿ ದೂರು ನೀಡುತ್ತಾರೆ. ಅವರು ದೂರುಕೊಟ್ಟ ಅರ್ಧಗಂಟೆಯಲ್ಲಿ ನನ್ನ ವಿಡಿಯೋ ಹೊರಬಿಡುತ್ತಾರೆ. ಇದೆಲ್ಲವನ್ನು ನೋಡಿದರೆ ಎಸ್ಐಟಿ ಯಾರ ಪರ ಇದೆ ಎಂಬ ಅನುಮಾನ ಮೂಡುತ್ತದೆ ಎಂದಿದ್ದಾಳೆ.
ಇನ್ನು ಎರಡು ದಿನದಲ್ಲಿ ನ್ಯಾಯ ಸಿಗುವುದಾಗಿ ಯುವತಿ ವಿಡಿಯೋ ಭರವಸೆ ವ್ಯಕ್ತಪಡಿಸಿದ್ದಾಳೆ.
ವಿಡಿಯೋದಲ್ಲಿ ಯುವತಿ ಹೇಳುತ್ತಿರುವುದು ಎಲ್ಲಾ ಸುಳ್ಳು: ಸೌಮೇಂದು ಮುಖರ್ಜಿ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೆ ಸಿಡಿಯಲ್ಲಿ ಕಾಣಿಸಿಕೊಂಡಿದ್ದ ಯುವತಿ ವಿಡಿಯೋ ದಲ್ಲಿ ಹೇಳುತ್ತಿರುವುದು ಎಲ್ಲಾ ಸುಳ್ಳು. ಯುವತಿ ಯಾವುದೇ ರೀತಿಯ ವಿಡಿಯೋ ನೀಡಿಲ್ಲ ಎಂದು ಎಸ್ ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಸ್ಪಷ್ಟಪಡಿಸಿದ್ದಾರೆ.
ಯುವತಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಯುವತಿಗೆ 5 ಬಾರಿ ನೋಟಿಸ್ ನೀಡಿದ್ದರು ವಿಚಾರಣೆಗೆ ಹಾಜರಾಗಿಲ್ಲ . ಯುವತಿ ಇದ್ದ ಸ್ಥಳದಲ್ಲೇ ವಿಚಾರಣೆ ಮಾಡುವುದಾಗಿಯೂ ಭರವಸೆ ನೀಡಿದ್ದೇವು. ಆದರೂ, ಯುವತಿ ಇದೂವರೆಗೂ ತಾನಿರುವ ಸ್ಥಳದ ಮಾಹಿತಿ ಬಿಟ್ಟುಕೊಟ್ಟಿಲ್ಲ ಎಂದರು.