ನಂದಿಗ್ರಾಮ: ರಾಷ್ಟ್ರರಾಜಧಾನಿ ದೆಹಲಿಗೆ ಟ್ರಾಕ್ಟರ್ ಗಳನ್ನು ಕೊಂಡೊಯ್ದು ಸಂಸತ್ ಆವರಣದಲ್ಲೇ ಮಂಡಿ ತೆರೆಯುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಶನಿವಾರ ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ನಡೆದ ಮಹಾಪಂಚಾಯತ್ನಲ್ಲಿ ಭಾಗವಹಿಸಿದ ಟಿಕಾಯತ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಪೋರೇಟ್ ಹಿತಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಅಂತೆಯೇ, ‘ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ನಿರ್ಣಯಿಸುವ ಆ ದಿನದಂದು ಟ್ರ್ಯಾಕ್ಟರ್ಗಳು ಮತ್ತೆ ದೆಹಲಿಗೆ ಪ್ರವೇಶಿಸಲಿದ್ದು, ಸಂಸತ್ತಿನಲ್ಲಿ ಹೊಸ ಮಂಡಿ ತೆರೆಯಲಾಗುವುದು ಎಂದು ಹೇಳಿದ್ದಾರೆ.
‘ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸುವ ಆ ದಿನ ಸಂಸತ್ತಿನಲ್ಲಿ ಹೊಸ ಮಂಡಿ ತೆರೆಯಲಾಗುವುದು. ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು. ಟ್ರ್ಯಾಕ್ಟರ್ಗಳು ಮತ್ತೆ ದೆಹಲಿಗೆ ಪ್ರವೇಶಿಸಲಿದೆ. 3.5 ಲಕ್ಷ ಟ್ರ್ಯಾಕ್ಟರ್ಗಳು ಮತ್ತು 25 ಲಕ್ಷ ರೈತರು ಒಂದೇ ಆಗಿದ್ದಾರೆ. ಮುಂದಿನ ಗುರಿ ಸಂಸತ್ತಿನಲ್ಲಿ ಮಂಡಿ ತೆರೆದು ಬೆಳೆಗಳನ್ನು ಮಾರಾಟ ಮಾಡುತ್ತೇವೆ ಎಂದು ಹೇಳಿದರು.
ರೈತರು ಎಲ್ಲಿ ಬೇಕಾದರೂ ಬೆಳೆಗಳನ್ನು ಮಾರಾಟ ಮಾಡಬಹುದು ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ‘ಸಂಸತ್ತಿನಲ್ಲಿ ಮಂಡಿ ತೆರೆಯುವುದು ಉತ್ತಮ ಎಂದು ಭಾವಿಸುತ್ತೇನೆ. ರೈತರು ಹೊರಗಿನವರಾಗಿದ್ದು, ವ್ಯಾಪಾರಿಗಳು ಹೊರಗಿನವರಾಗಿರುತ್ತಾರೆ. ಖಂಡಿತವಾಗಿಯೂ ಅಲ್ಲಿ ಖರೀದಿ ನಡೆಯಲಿದೆ ಎಂದು ಟೀಕಿಸಿದರು.
‘ಕಾರ್ಪೋರೇಟ್ ಬಿಜೆಪಿ’ಗೆ ಮತ ಹಾಕಬೇಡಿ
ಇದೇ ವೇಳೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸದಂತೆ ಮನವಿ ಮಾಡಿದ ರಾಕೇಶ್ ಟಿಕಾಯತ್, ಬಿಜೆಪಿಗೆ ಮತ ಹಾಕಬೇಡಿ. ಅವರಿಗೆ ಮತ ಹಾಕಿದರೆ ನಿಮ್ಮ ಜಮೀನನ್ನು ದೊಡ್ಡ ಕಾರ್ಪೋರೇಟ್ ಮತ್ತು ಕೈಗಾರಿಕೆಗಳಿಗೆ ಬಿಟ್ಟುಕೊಡುತ್ತಾರೆ. ನಿಮ್ಮನ್ನು ಭೂರಹಿತರನ್ನಾಗಿ ಮಾಡುತ್ತಾರೆ. ನಿಮ್ಮ ಜೀವನೋಪಾಯವನ್ನು ಪಣಕ್ಕಿಟ್ಟು ಅವರು ದೇಶವನ್ನು ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರಿಸುತ್ತಾರೆ ಎಂದು ಟಿಕಾಯತ್ ಆರೋಪಿಸಿದರು.