ಪಂಜಾಬ್ ರೈತರಿಂದ ‘ದೆಹಲಿ ಚಲೋ’: ಗುಂಪು ಚದುರಿಸಲು ಪೊಲೀಸರಿಂದ ಜಲ ಫಿರಂಗಿ, ಅಶ್ರುವಾಯು ಪ್ರಯೋಗ
ಚಂಡೀಗಢ: ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ದೆಹಲಿ ಚಲೋ ಚಳವಳಿ ಭಾಗವಾಗಿ ಪಂಜಾಬ್ ರೈತರು ಪೊಲೀಸ್ ಬ್ಯಾರಿಕೇಡ್ ಮುರಿದು ಹರ್ಯಾಣ ರಾಜ್ಯ ಪ್ರವೇಶಿಸಲು ಮುಂದಾದ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ ಪ್ರಸಂಗ ನಡೆದಿದೆ.
ಪಂಜಾಬ್-ಹರ್ಯಾಣ ಗಡಿಯ ಶಂಭು ಎಂಬಲ್ಲಿ ರೈತರು ಗುಂಪು ಸೇರಿ ದೆಹಲಿ ಚಲೋ ಆರಂಭಿಸಿ ಪೊಲೀಸ್ ಬ್ಯಾರಿಕೇಡ್ ತೆಗೆದು ನುಗ್ಗಲು ಪ್ರಯತ್ನಿಸುತ್ತಿದ್ದರು. ಆಗ ಹರ್ಯಾಣ ಪೊಲೀಸರು ಧ್ವನಿವರ್ಧಕ ಮೂಲಕ ಪ್ರತಿಭಟನಾಕಾರರಿಗೆ ಎಚ್ಚರಿಸುತ್ತಿದ್ದರು. ಈ ವೇಳೆ ಹರ್ಯಾಣ-ಪಂಜಾಬ್ ಶಂಭು ಅಂತರಾಜ್ಯ ಗಡಿಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಪ್ರತಿಭಟನಾ ನಿರತ ರೈತರು ಗಗ್ಗರ್ ನದಿಗೆ ಎಸೆಯಲು ನೋಡಿದರು. ಕೆಲವರು ಕಪ್ಪು ಬಾವುಟ ಪ್ರದರ್ಶಿಸುತ್ತಿದ್ದರು.
ಪ್ರತಿಭಟನಾಕಾರರು ದೆಹಲಿಗೆ ತೆರಳದಂತೆ ಹರ್ಯಾಣ ಪೊಲೀಸರು ಹಲವು ಹಂತಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿದ್ದರು.