ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಸಿದ್ದರಾಮಯ್ಯ ಸಚಿವ ಸಂಪುಟದ ಕೆಲವು ಸಚಿವರು ಹೀನಾಯ ಸೋಲು ಅನುಭವಿಸಿದ್ದಾರೆ.
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಸೋಲನುಭವಿಸಿದ್ದಾರೆ. ಬಿಜೆಪಿಯ ಚಂದ್ರಪ್ಪ, ಹೊಳಲ್ಕೆರೆ ಕ್ಷೇತ್ರದಲ್ಲಿ ಆಂಜನೇಯ ವಿರುದ್ಧ ಸುಲಭ ಗೆಲುವನ್ನು ಸಾಧಿಸಿದರು.
ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ಉಮಾಶ್ರೀ, ಧಾರವಾಡದಲ್ಲಿ ವಿನಯ್ ಕುಲಕರ್ಣಿ, ಧಾರವಾಡ ಕಲಘಟಗಿಯಲ್ಲಿ ಸಂತೋಷ್ ಲಾಡ್, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಬಿ. ರಮಾನಾಥ ರೈ ಸೋಲನುಭವಿಸಿದ್ದಾರೆ.
ಹಾಗೆಯೇ ಟಿ ನರಸಿಪುರ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತ ಹಾಗೂ ಲೋಕೋಪಯೋಗಿ ಸಚಿವ ಎಚ್.ಸಿ ಮಹಾದೇವಪ್ಪ ಹೀನಾಯವಾಗಿ ಸೋತಿದ್ದಾರೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜಯಗಳಿಸಿದ್ದ ಗೀತಾ ಮಹದೇವ ಪ್ರಸಾದ್, ಬಿಜೆಪಿಯ ನಿರಂಜನ್ ವಿರುದ್ಧ ಸೋತಿದ್ದಾರೆ.
ಹಾವೇರಿಯಿಂದ ಸ್ಪರ್ದಿಸಿದ್ದ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಬಿಜೆಪಿಯ ನೆಹರೂ ಓಲೇಕಾರ್ ವಿರುದ್ಧ ಸೋಲನುಭವಿಸಿದ್ದಾರೆ. ಯಲಬುರ್ಗಾದಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಸೋಲನುಭವಿಸಿದ್ದಾರೆ.
ಇನ್ನೂ ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದ ಕಾನೂನೂ ಖಾತೆ ಸಚಿವ ಟಿ.ಬಿ ಜಯಚಂದ್ರ ಸೋತಿದ್ದಾರೆ, ಉಡುಪಿಯಲ್ಲಿ ಪ್ರಮೋದ್ ಮದ್ವರಾಜ್ ಹೀನಾಯವಾಗಿ ಸೋತಿದ್ದಾರೆ. ಸಾರಿಗೆ ಸಚಿವ ಎಚ್.ಎಂ ರೇವಣ್ಣ ಕೂಡ ಹೀನಾಯ ಸೋಲನುಭವಿಸಿದ್ದಾರೆ.
ಕಲಬುರ್ಗಿ ಜಿಲ್ಲೆಯ ಸೇಡಂನಲ್ಲಿ ಡಾ.ಶರಣಪ್ರಕಾಶ ಪಾಟೀಲ್, ಮಾಜಿ ಸಚಿವರಾದ ಅಭಯಚಂದ್ರ ಜೈನ್ (ಮೂಡುಬಿದಿರೆ) ಸೋಲನುಭವಿಸಿದ್ದಾರೆ.